ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ ಸೇನಾ ವಲಯದಲ್ಲಿ ಹಿಮಪಾತವಾಗಿದ್ದು ಐವರು ಯೋಧರು ಹಿಮದಡಿ ಸಿಲುಕಿದ್ದಾರೆ.
ಇಲ್ಲಿನ ಬಟಾಲಿಕ್ ವಲಯದಲ್ಲಿ ಹಲವು ಬಾರಿ ಹಿಮಕುಸಿತವಾಗಿದೆ. ಹಿಮದ ಅಡಿಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಸಿಲುಕಿದ್ದರು. ವಿಶೇಷವಾಗಿ ತರಬೇತಿ ಪಡೆದಿರುವ ಹಿಮಪಾತದಲ್ಲಿ ರಕ್ಷಣಾ ಕಾರ್ಯ ನಡೆಸುವ ತಂಡವು ಇಬ್ಬರು ಸೈನಿಕರನ್ನು ರಕ್ಷಿಸಿದ್ದು, ಉಳಿದವರ ರಕ್ಷಣೆಗಾಗಿ ಪ್ರಯತ್ನಿಸಲಾಗುತ್ತಿದೆ.
ಬುಧವಾರದಿಂದ ಶ್ರೀನಗರದಲ್ಲಿ 83.9 ಮಿ.ಮೀ. ಮಳೆ ಹಾಗೂ ಹಿಮ ಸುರಿದಿದೆ. ದಕ್ಷಿಣ ಕಾಶ್ಮೀರದಲ್ಲಿ 69.9 ಮಿ.ಮೀ. ಮಳೆಯಾಗಿದೆ.
ಈ ವರ್ಷದ ಜನವರಿಯಲ್ಲಿ ದೇಶದ ಬೇರೆ ಬೇರೆ ವಲಯಗಳಲ್ಲಿ ಆಗಿರುವ ಹಿಮಪಾತದಲ್ಲಿ ಮೇಜರ್ ಮತ್ತು ಜೂ.ಕಮಿಷನ್ಡ್ ಆಫೀಸರ್ ಸೇರಿದಂತೆ 20 ಯೋಧರು ಸಾವಿಗೀಡಾಗಿದ್ದಾರೆ.