ಅದು ಸರಳ ಕಾರ್ಯಕ್ರಮ. ಆದರೂ ತಾರಾ ವರ್ಚಸ್ಸಿನಿಂದ ಕಂಗೊಳಿಸುತ್ತಿತ್ತು. ‘ಸಾಗುವ ದಾರಿಯಲ್ಲಿ...’ ಸಿನಿಮಾದ ಟೀಜರ್ ಬಿಡುಗಡೆ ಮಾಡಲು ಸುದೀಪ್ ಹಾಜರಿದ್ದರು.
ಶಿವಕುಮಾರ್ ಗೌಡ ನಿರ್ದೇಶನದ ‘ಸಾಗುವ ದಾರಿಯಲ್ಲಿ’ ಸಿನಿಮಾಕ್ಕೆ ‘ಸವಾಲುಗಳ ಚಕ್ರವ್ಯೂಹ’ ಎಂಬ ಟ್ಯಾಗ್ಲೈನ್ ಕೂಡ ಇದೆ. ವಿ. ಶಿವಶಂಕರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನೈಜ ಘಟನೆಯೊಂದನ್ನು ಆಧರಿಸಿ ನಿರ್ದೇಶಕರು ಕಥೆ ಹೆಣೆದಿದ್ದಾರೆ.
ಕಾರ್ಯಕ್ರಮದಲ್ಲಿ ಅನೂಪ್ ಕೊಂಚ ಒತ್ತಡದಲ್ಲಿದ್ದವರಂತೆ ಕಂಡರು. ಅದನ್ನು ಗಮನಿಸಿದ ಸುದೀಪ್, ‘ಆರಂಭದಲ್ಲಿ ನಾನೂ ಇಂಥದ್ದೇ ಟೆನ್ಷನ್ ಅನುಭವಿಸಿದ್ದೇನೆ. ರಾಜಕುಮಾರ್, ವಿಷ್ಣುವರ್ಧನ್, ಶಿವಣ್ಣ ಅವರೆಲ್ಲ ನನ್ನ ಸಿನಿಮಾವನ್ನು ನೋಡಲಿ ಎಂದು ಬಯಸುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ಅನೇಕ ಜನರನ್ನು ನೋಡಿದ್ದೇನೆ. ನಾವೆಲ್ಲರೂ ಒಟ್ಟೊಟ್ಟಿಗೇ ಬದುಕನ್ನು ಸವೆಸಿದ್ದೇವೆ. ಬೆಳೆದಿದ್ದೇವೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಸಿನಿಮಾದ ಟೀಸರ್ ಅನ್ನು ಮೆಚ್ಚಿಕೊಂಡ ಅವರು, ‘ಈ ತಂಡದಲ್ಲಿ ಒಂದು ಮುಗ್ಧತೆ–ಪ್ರಾಮಾಣಿಕತೆ ಇದೆ. ಈ ಮುಗ್ಧತೆ ಎಂದಿಗೂ ಹಾಳಾಗದಿರಲಿ’ ಎಂದು ಹಾರೈಸಿದರು.
ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಡಿಗಲ್ಲು ಹಾಕಿದ ಮಹಾನುಭಾವರಿಗೆ ಈ ಸಿನಿಮಾದ ಮೂಲಕ ಗೌರವ ಸಲ್ಲಿಸುವ ಉದ್ದೇಶ ನಮ್ಮದು’ ಎಂದರು. ಆ ಉದ್ದೇಶದಿಂದಲೇ ಈ ಸಿನಿಮಾದಲ್ಲಿ ‘ನಮೋ ವೆಂಕಟೇಶ’ ಹಾಡನ್ನೂ ಬಳಕೆ ಮಾಡಿಕೊಳ್ಳಲಾಗಿದೆಯಂತೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಾ.ರಾ. ಗೋವಿಂದ, ಸುದೀಪ್ ಅವರನ್ನು ಪ್ರಶಂಸಿಸುವುದಕ್ಕಾಗಿಯೇ ತಮ್ಮ ಮಾತುಗಳನ್ನು ಮೀಸಲಿಟ್ಟರು. ದೇವರಾಜ್, ಅನೂಪ್ ಸಾ.ರಾ. ಗೋವಿಂದ, ಪವಿತ್ರಾ ಗೌಡ, ಜೈಜಗದೀಶ್, ಸತ್ಯಜಿತ್, ಶರತ್ ಲೋಹಿತಾಶರ್ವ, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.