ದಕ್ಷಿಣ ಭಾರತ ಚಿತ್ರರಂಗದ ನಟ–ನಟಿಯರು ಮತ್ತು ದಿಗ್ಗಜರ ಸಂಗಮ ಅದು. ತಾರೆಯರ ನೃತ್ಯ, ಅಭಿಮಾನಿಗಳ ಚಪ್ಪಾಳೆ–ಶಿಳ್ಳೆ ಬೆರೆತಿದ್ದ 2ನೇ ವರ್ಷದ ‘ಐಫಾ’ (ಐಐಎಫ್ಎ: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ) ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೈದರಾಬಾದ್ ಸಾಕ್ಷಿಯಾಯಿತು.
ಬಣ್ಣದ ದೀಪಗಳಿಂದ ಜಗಮಗಿಸುತ್ತಿದ್ದ ವೇದಿಕೆಯಲ್ಲಿ–ಯುಗಾದಿ ಹಬ್ಬದ ಸಂದರ್ಭದಲ್ಲಿ–ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಿಗೆ ಹದಿನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡದ ‘ಕಿರಿಕ್ ಪಾರ್ಟಿ’ ತಂಡ, ಅತ್ಯುತ್ತಮ ಚಿತ್ರ ಸೇರಿ ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ರಕ್ಷಿತ್ ಶೆಟ್ಟಿ 4 ಪ್ರಶಸ್ತಿಗಳಿಗೆ (ನಟ, ಪೋಷಕ ನಟ, ನೃತ್ಯ ನಿರ್ದೇಶನ ಹಾಗೂ ಸಾಹಿತ್ಯ) ಭಾಜನರಾದರು.
ಉಳಿದಂತೆ, ‘ಯೂ ಟರ್ನ್’ ಚಿತ್ರಕ್ಕಾಗಿ ನಿರ್ದೇಶನ ಮತ್ತು ಕಥೆ ವಿಭಾಗದ ಪ್ರಶಸ್ತಿ ಪವನ್ ಕುಮಾರ್ ಅವರದಾಯಿತು. ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರಿಗೆ ‘ಭಾರತೀಯ ಚಲನಚಿತ್ರರಂಗಕ್ಕೆ ನೀಡಿದ ಅಭೂತಪೂರ್ವ ಕೊಡುಗೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾರೂಲ್ ಯಾದವ್ ಅತ್ಯುತ್ತಮ ನಟಿ ಹಾಗೂ ಬಿ. ಅಜನೀಶ್ ಲೋಕನಾಥ್ಗೆ ಸಂಗೀತ ನಿರ್ದೇಶನ ಪ್ರಶಸ್ತಿ ಸಿಕ್ಕಿತು.
ನಟ ರವಿಚಂದ್ರನ್ ಅವರು ತಮ್ಮದೇ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನಟಿಯರಾದ ರಚಿತಾ ರಾಮ್, ಮೇಘನಾ ಗಾಂವ್ಕರ್, ಲಕ್ಷ್ಮೀ ರೈ, ನಿಕ್ಕಿ ಗಲ್ರಾನಿ, ರಾಶಿ ಖನ್ನಾ, ರಿತಿಕಾ ಸಿಂಗ್, ಅಖಿಲ್, ಸಾಯಿ ಧರಂ ತೇಜ್ ಮುಂತಾದವರು ಹಾಡುಗಳಿಗೆ ಹೆಜ್ಜೆ ಹಾಕಿದರು.
‘ಕಿರಿಕ್ ಪಾರ್ಟಿ’ ಚಿತ್ರತಂಡಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಿದ ತೆಲುಗು ನಟ ಜೂನಿಯರ್ ಎನ್ಟಿಆರ್ (ನಂದಮೂರಿ ತಾರಕ ರಾಮರಾವ್) – ‘ನನ್ನ ತಾಯಿ ಕರ್ನಾಟಕದ ಕರಾವಳಿಯ ಕುಂದಾಪುರದವರು. ನನಗೂ ಕನ್ನಡ ಮಾತನಾಡಲು ಬರುತ್ತದೆ’ ಎಂದು ಕನ್ನಡದಲ್ಲೇ ಮಾತನಾಡಿದರು. ಪುನೀತ್ ರಾಜಕುಮಾರ್ ನಟನೆಯ ‘ಚಕ್ರವ್ಯೂಹ’ ಚಿತ್ರಕ್ಕಾಗಿ ತಾವು ಹಾಡಿದ ‘ಗೆಳೆಯಾ ಗೆಳೆಯಾ’ ಹಾಡಿನ ಸಾಲುಗಳನ್ನು ಗುನುಗಿದರು.
ಕನ್ನಡ ಚಿತ್ರರಂಗದ ಶಾನ್ವಿ ಶ್ರೀವಾಸ್ತವ್, ರಶ್ಮಿಕಾ ಮಂದಣ್ಣ, ಮಾನ್ವಿತಾ ಹರೀಶ್, ಶುಭ್ರಾ ಅಯ್ಯಪ್ಪ, ಐಂದ್ರಿತಾ ರೇ, ದಿಗಂತ್, ನಭಾ ನಟೇಶ್, ಕಾರುಣ್ಯ ರಾಮ್, ಶ್ರೀನಾಥ್, ದೇವರಾಜ್, ಪ್ರಜ್ವಲ್ ದೇವರಾಜ್, ಆರ್ಜೆ ರೋಹಿತ್, ತಿಲಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.
ಸಮಂತಾ ರುತ್ ಪ್ರಭು, ರಾಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶ್ರೀಯಾ ಶರಣ್, ಅಧಿತಿ ರಾವ್, ಪ್ರಣೀತಾ, ಶ್ರೀದೇವಿ, ಜಯಪ್ರದಾ, ಏಂಜೆಲಾ ಕ್ರಿಸ್ಲಿಂಜ್ಕಿ, ದೇವರಾಜ್, ಶ್ರೀನಾಥ್, ವಿಕ್ಟರಿ ವೆಂಕಟೇಶ್, ಜಯಂ ರವಿ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಸಭಾಂಗಣ ಅಲಂಕರಿಸಿದ್ದರು.
ಕನ್ನಡ ಚಿತ್ರರಂಗ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆಯನ್ನು ನಟಿ ಮೇಘನಾ ಗಾಂವ್ಕರ್ ಹಾಗೂ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಟ್ಟರು.