ಮೂಡುಬಿದಿರೆ: ಪುತ್ತಿಗೆ ಗ್ರಾಮದ ಕೊ ಡ್ಯಡ್ಕ ಬಂಕಿಮಜಲು ಎಂಬಲ್ಲಿ ಕೊರಗ ಫಲಾನುಭವಿಗಳಿಗೆ ಮಂಜೂರಾದ ಭೂಮಿಯಲ್ಲಿ ಖಾಸಗಿ ವ್ಯಕ್ತಿ ಯೊಬ್ಬರು ಕೆಂಪು ಕಲ್ಲು ಕ್ವಾರಿ ನಡೆಸುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಸರ್ಕಾರ ಸಮಗ್ರ ಗಿರಿಜನ ಯೋಜನೆ ಯಡಿಯಲ್ಲಿ ಸುಮಾರು 15 ವರ್ಷಗಳ ಹಿಂದೆ ಬಂಕಿಮಜಲು ಎಂಬಲ್ಲಿ 20 ಫಲಾನುಭವಿಗಳಿಗೆ ತಲಾ ಒಂದು ಎಕರೆಯಂತೆ ನಿವೇಶನ ಮಂಜೂರು ಮಾಡಿತ್ತು. ಖಾಸಗಿ ವ್ಯಕ್ತಿಗಳಿಂದ ಖರೀ ದಿಸಿದ ಈ ಭೂಮಿಯಲ್ಲಿ ಶೇ 75ರಷ್ಟು ಮೊತ್ತದ ಪಾಲು ಸರ್ಕಾರದ್ದಾಗಿದ್ದರೆ, ಉಳಿದ ಶೇ 25ರಷ್ಟು ಮೊತ್ತದ ಪಾಲು ಫಲಾನುಭವಿಗಳು ನೀಡಬೇಕಿತ್ತು. ಆದರೆ ಸರ್ಕಾರ ಮಂಜೂರು ಮಾಡಿದ ಜಾಗ ಕೃಷಿಗೆ ಯೋಗ್ಯವಲ್ಲವೆಂಬ ಕಾರಣಕ್ಕೆ ಫಲಾನುಭವಿಗಳು ಈ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಲು ನಿರಾಕರಿಸಿದ್ದರು. ಬಳಿಕ ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ದನ ಗೌಡ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಫಲಾನುಭವಿಗಳ ಜತೆ ಮಾತುಕತೆ ನಡೆಸಿದ ಫಲವಾಗಿ ಫಲಾನುಭವಿಗಳು ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಬಳಕೆ ಮಾಡ ಲಾರಂಭಿಸಿದರು. ಬಾವಿ ತೆಗೆದು, ಕೃಷಿ ಆರಂಭಿಸಿದ್ದರು.
ಆದರೆ ಕೊರಗರು ಅನುಭವಿಸಿ ಕೊಂಡು ಬಂದಿರುವ ಈ ಜಾಗದಲ್ಲಿ ಎರಡು ರೀತಿಯ ತೊಂದರೆ ಎದುರಾ ಗಿದೆ. ‘ಸರ್ಕಾರ ಕೊರಗರಿಗೆ ಗಡಿ ಗುರುತು ಮಾಡಿದ ಜಾಗದಲ್ಲಿ ಕೆಂಪು ಕಲ್ಲು ಕ್ವಾರಿ ಎಗ್ಗಿಲ್ಲದೆ ನಡೆಯುತ್ತಿದೆ. ಜನವಸತಿ ಇರುವ ಪ್ರದೇಶದಲ್ಲಿ ಕಲ್ಲು ಕ್ವಾರಿ ಕಾರ್ಯಾಚರಿಸುತ್ತಿದ್ದು ಕೊರಗ ಕುಟುಂಬ ಆತಂಕಕ್ಕೀಡಾಗಿದೆ. ಈ ಬಗ್ಗೆ ಕೊರಗ ಸಮುದಾಯ ಕಳೆದ ಅಕ್ಟೋಬರ್ನಲ್ಲಿ ಮೂಡುಬಿದಿರೆ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದರು. ಇಲ್ಲಿನ ಅಧಿಕಾ ರಿಗಳು ಇದುವರೆಗೂ ದೂರಿನ ಬಗ್ಗೆ ತನಿಖೆ ನಡೆಸದೆ ನಮ್ಮ ಅರ್ಜಿಯನ್ನು ನಿರ್ಲಕ್ಷಿಸಿದ್ದಾರೆ’ ಎಂದು ಸ್ಥಳಿಯ ಕೊರಗ ಸಮುದಾಯದ ಆನಂದ ಅವರು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದ ಜತೆ ಅಳಲು ತೋಡಿಕೊಂಡಿದ್ದಾರೆ.
ಕೊರಗರಿಗೆ ಮಂಜೂರಾದ ಜಮೀ ನಿನ ಮಧ್ಯೆಯೆ ಕಾಂಕ್ರೀಟ್ ರಸ್ತೆ ನಿರ್ಮಾ ಣವಾಗುತ್ತಿರುವುದಕ್ಕು ಕೊರಗರು ಆಕ್ಷೇಪ ಎತ್ತಿದ್ದಾರೆ. ಖಾಸಗಿ ವ್ಯಕ್ತಿಗಳ ಹಿತಕಾಯಲು ನಮ್ಮ ಜಮೀನಿನ ಮಧ್ಯೆ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆಗೆ ಮಂಜೂರಾದ ಜಾಗ ಇದಲ್ಲ ಎಂದು ಕೊರಗರು ಆರೋಪಿಸಿದ್ದಾರೆ.
ಯಾವುದೇ ದೂರು ಬಂದಿಲ್ಲ: ‘ಪುತ್ತಿಗೆಯಲ್ಲಿ ಕೊರಗರ ಜಮೀನು ಕಲ್ಲು ಕ್ವಾರಿಗೆ ಅತಿಕ್ರಮಣವಾಗಿದೆ ಎಂಬುದರ ಬಗ್ಗೆ ನನಗೆ ಅಧಿಕೃತ ದೂರು ಬಂದಿಲ್ಲ. ಮಾಧ್ಯಮ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.