ತುಮಕೂರು: ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೇಯರ್ ರವಿಕುಮಾರ್ ಮತ್ತವರ ತಂಡ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.
ಮೇಯರ್ ಜತೆಯಲ್ಲಿ ಪಾಲಿಕೆ ಸದಸ್ಯರಾದ ಸುಧೀಶ್ವರ್, ಮರಿಗಂಗಯ್ಯ, ಟಿ.ಎಚ್.ವಾಸುದೇವ್, ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ತಿಪ್ಪೇರುದ್ರಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಶಾ, ಗುತ್ತಿಗೆದಾರ ಶ್ರೀಧರ್ ಬೀಳಗಿ ಇದ್ದರು.
‘ಕಾರ್ಮಿಕರ ವಸತಿ ಗೃಹ ಸೇರಿ ಕೆಲವು ಕಾಮಗಾರಿಗಳ ಅಳತೆಯನ್ನು ತೆಗೆದುಕೊಂಡರು. ಕಾಮಗಾರಿಗಳ ಬಗ್ಗೆ ವಿವರ ಕಲೆ ಹಾಕಿದರು. ಕೆಲವು ದಾಖಲೆಗಳನ್ನು ತರಿಸಿಕೊಂಡಿದ್ದರು’ ಎಂದು ಹೇಳಲಾಗಿದೆ.
ಅಜ್ಜಗೊಂಡನಜಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ. ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಈಚೆಗಷ್ಟೇ ರವಿಕುಮಾರ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
ನಡೆಯದ ಸಾಮಾನ್ಯ ಸಭೆ: ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ಮಹಾ ನಗರ ಪಾಲಿಕೆ ಸಾಮಾನ್ಯ ಸಭೆ ಕರೆದಿಲ್ಲ. ನಿಯಮದ ಪ್ರಕಾರ ತಿಂಗಳಿಗೊಂದು ಸಾಮಾನ್ಯ ಸಭೆ ನಡೆಯಬೇಕು. ಫೆಬ್ರುವರಿಯಲ್ಲಿ ಬಜೆಟ್ ಸಭೆ ನಡೆದಿದೆ. ಅದನ್ನು ಬಿಟ್ಟಿರೆ ಇನ್ನೂ ಸಭೆ ಕರೆದಿಲ್ಲ ಎಂದು ಸದಸ್ಯರು ಹೇಳುತ್ತಿದ್ದಾರೆ.
**
ಕೊನೆಗೂ ಬಂತು ವರದಿ!
ತುಮಕೂರು: ಮೈದಾಳ ಕೆರೆಯಲ್ಲಿ ಲಭ್ಯ ಇರುವ ನೀರಿನ ವರದಿ ನೀಡಲು ಸತಾಯಿಸುತ್ತಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗುರುವಾರ ಪಾಲಿಕೆಗೆ ವರದಿ ನೀಡಿದ್ದಾರೆ ಎಂದು ಮೇಯರ್ ಕಚೇರಿ ಮೂಲಗಳು ತಿಳಿಸಿವೆ.
‘ಮೈದಾಳ ಕೆರೆಯು 50 ಎಕರೆ ವಿಸ್ತೀರ್ಣವಿದೆ. ಕೆರೆಯಲ್ಲಿ 2 ಕೋಟಿ ಲೀಟರಿನಷ್ಟು ನೀರಿದ್ದು, 1.80 ಕೋಟಿ ಲೀಟರ್ ನೀರನ್ನು ತುಮಕೂರು ನಗರಕ್ಕೆ ಕೊಡಬಹುದು’ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಬುಗುಡನಹಳ್ಳಿ ಕೆರೆಯಲ್ಲಿ ಸದ್ಯ 1.20 ಕೋಟಿ ಲೀಟರ್ ನೀರಿದೆ. ಬುಗುಡನಹಳ್ಳಿ ಕೆರೆಗಿಂತಲೂ ಹೆಚ್ಚು ನೀರನ್ನು ಈಗಿನ ಸ್ಥಿತಿಯಲ್ಲಿ ಮೈದಾಳ ಕೆರೆಯಿಂದ ಪಡೆಯಬಹುದಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಒಂದೆರಡು ಮಳೆಗೆ ಮೈದಾಳ ಕೆರೆ ತುಂಬಲಿದೆ. ನಗರದ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮೈದಾಳ ಕೆರೆ ನೀರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನರ್ ರಾಜ್ ಸೋಮವಾರ ಸಭೆ ಕರೆದಿದ್ದು, ಸಭೆಯಲ್ಲಿ ನೀರು ಪಡೆಯುವ ಬಗ್ಗೆ ತೀರ್ಮಾನವಾಗಲಿದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.