ಭಾರತಕ್ಕೆ ಬೆಲ್ಜಿಯಂ ಸಾಲ
ನವದೆಹಲಿ, ಏ. 7– ಬೆಲ್ಜಿಯಂ ಸರ್ಕಾರವು ಭಾರತಕ್ಕೆ 6 ಕೋಟಿ ಬೆಲ್ಜಿಯನ್ ಫ್ರಾಂಕ್ಸ್ ಸಾಲ ನೀಡಲು ಮುಂದಾಗಿದೆ. ಈ ಹಣವನ್ನು ಬೆಲ್ಜಿಯಂನಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳಲು ಉಪಯೋಗಿಸಬೇಕಾಗುವುದು.
ಈ ವಿಷಯವನ್ನು ಬೆಲ್ಜಿಯನ್ ವಿದೇಶಾಂಗ ಕಚೇರಿಯ ವಿದೇಶಾಂಗ ವಾಣಿಜ್ಯದ ಡೈರೆಕ್ಟರ್ ಜನರಲ್ ವೆನ್ಬೆಲ್ಲಿಂಗೆನ್ ಅವರು ವಾಣಿಜ್ಯ ಚರ್ಚೆ ಕಾಲದಲ್ಲಿ ಭಾರತದ ವಾಣಿಜ್ಯ ಸಚಿವ ಶಾಖೆಯ ಜಂಟೀ ಕಾರ್ಯದರ್ಶಿ ಡಿ. ಶ್ರೀನಿವಾಸಾಚಾರ್ ಅವರಿಗೆ ತಿಳಿಸಿದರು.
ಕಮ್ಮುನಿಸ್ಟ್ ಚೀನದಲ್ಲಿ ನಾಗಾ ಬಂಡಾಯಗಾರರು
ಇಂಫಾಲ್, ಏ. 7– 300 ನಾಗಾ ಬಂಡಾಯಗಾರರು ಬರ್ಮಾ ಮಾರ್ಗವಾಗಿ ಚೀನವನ್ನು ಪ್ರವೇಶಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಪಡೆಯುವುದರ ಜೊತೆ ಗೆರಿಲ್ಲಾ ಹೋರಾಟದಲ್ಲಿ ತರಬೇತಿ ಪಡೆಯುವುದೇ ಅವರ ಈ ಚೀನಾ ಪ್ರವೇಶದ ಉದ್ದೇಶವೆಂದು ನಂಬಲರ್ಹ ಮೂಲಗಳು ತಿಳಿಸಿವೆ.
ಬರ್ಮಿ ಸೇನೆಗಳು ಅವರನ್ನು ತಡೆಯಲು ಯತ್ನಿಸಿದರೆಂದೂ ಅವರಲ್ಲಿ ಅನೇಕರು ಬರ್ಮಿ ಆಕ್ರಮಣದಿಂದ ಗಾಯಗೊಂಡರೆಂದೂ ಹೇಳಲಾಗಿದೆ. ಹೀಗಿದ್ದರೂ ಅವರು ಚೀನದೆಡೆ ನಡೆದರು.
ಕೇಂದ್ರದ ಅನಗತ್ಯ ಮಧ್ಯಪ್ರವೇಶಕ್ಕೆ ನಾಯಕ್, ಎಸ್ಸೆನ್ ವಿರೋಧ
ಮುಂಬೈ, ಏ. 7– ‘ರಾಜ್ಯಗಳಿಗೆ ಹೆಚ್ಚು ಅಧಿಕಾರ ನೀಡಬೇಕೆಂದೂ’ ಕೇಂದ್ರ ‘ಮಧ್ಯ ಪ್ರವೇಶಿಸುವ’ ಪ್ರವೃತ್ತಿ ಕಡಿಮೆಯಾಗಬೇಕೆಂದೂ ಮೈಸೂರು ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ. ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಮುಂಬೈಯಲ್ಲೂ, ಮೈಸೂರಿನ ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲೂ ಯು.ಎನ್.ಐ. ಪ್ರತಿನಿಧಿಯು ಇತ್ತೀಚೆಗೆ ಸಂದರ್ಶಿಸಿದಾಗ ಅವರುಗಳು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.