ಯಾದಗಿರಿ: ನೀರಿದ್ದರೂ ನಿರ್ವಹಣೆ ಇಲ್ಲದೇ ಸೊರಗಿರುವ ಲುಂಬಿನಿ ವನಕ್ಕೆ ಸಾಹಿತಿಗಳಿಂದ ಪತ್ರಕರ್ತರಿಗೆ ಬುಲಾವ್ ಬಂತು. ಯಾವುದಕ್ಕೂ ಎಂದೂ ಚಕಾರವೆತ್ತದ ಸಾಹಿತಿಗಳಿಗೆ ಏನಾಗಿರಬಹುದು ಎಂದುಕೊಂಡು ಪತ್ರಕರ್ತರು ಲುಂಬಿನಿ ವನದತ್ತ ದೌಡಾಯಿಸಿದರು.
‘ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮಾಡಿದ ಘನಕಾರ್ಯ ಯಾವ್ದು ಹೇಳ್ರಿ?’ ಎಂಬ ಪ್ರಶ್ನೆ ಸಾಹಿತಿಗಳಿಂದ ಏಕಾಏಕಿ ಎದುರಾದಾಗ ಪತ್ರಕರ್ತರು ಪೇಚಿಗೆ ಸಿಲುಕಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಂತೆ ಉತ್ತರಕ್ಕಾಗಿ ತಡಕಾಡಿದರು.
‘ಜಿಲ್ಯಾಗ ಬಿಸಿಲು ಹೆಚ್ಚಿ 42 ಡಿಗ್ರಿ ಸೆಲ್ಸಿಯಸ್ ಆಗೇದ. ಇಡೀ ನಗರದಲ್ಲಿ ನೆರಳು ನೀಡುವ ಒಂದೂ ಮರಗಿಡ ಇಲ್ಲ. ಇಷ್ಟ್ ವರ್ಷ ಜನಕ್ಕೆ ಐ.ಬಿ (ಪ್ರವಾಸಿ ಮಂದಿರ) ಅಷ್ಟಿಷ್ಟು ನೆರಳು ನೀಡುತ್ತಿತ್ತು. ಈಗ ಅದನ್ನೂ ಜಿಲ್ಲಾಧಿಕಾರಿ ಬಂದ್ ಮಾಡ್ಯಾರ’ ಎಂದು ಸಾಹಿತಿಗಳು ಅಸಮಾಧಾನ ಹೊರಹಾಕಿದಾಗ ಉತ್ತರ ಸಿಕ್ಕ ಖುಷಿ ಪತ್ರಕರ್ತರದ್ದಾಗಿತ್ತು!
‘ಅಷ್ಟೇ ಅಲ್ರಿ ಬಡ ಸಾಹಿತಿಗಳು, ಸಂಘಟನೆಗಳು ಪತ್ರಿಕಾಗೋಷ್ಠಿ ನಡೆಸಲು ಐ.ಬಿ ಚಲೋ ಇತ್ತು. ಡಿ.ಸಿ ಮಾಡಿದ ಘನ ಕಾರ್ಯದಿಂದ ಮಂದಿನೂ ಬಿಸಿಲ್ಯಾಗ ಬೇಯುವಂತಾಗಿದೆ. ನಾವೂ ಖಾಸಗಿ ಹೋಟೆಲ್ನಾಗ ಕಾರ್ಯಕ್ರಮ ಮಾಡೋ ಹಂಗ್ ಆಗೇದ’ ಎಂದು ಅಳಲು ತೋಡಿಕೊಂಡರು.
‘ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೂಕ್ತ ಶೌಚಾಲಯ ಇಲ್ಲ. ಹೀಗಾಗಿ ಅಲ್ಲಿನ ಹುಡುಗಿಯರು ಎಷ್ಟೇ ಬಿಸಿಲಿದ್ದರೂ ಹೆಚ್ಚು ನೀರು ಕುಡಿಯುವುದನ್ನೇ ಬಿಟ್ಟಿದ್ದಾರೆ. ಸಮಸ್ಯೆ ಬಗೆಹರಿಸಿ ಎಂದು ಕಾಲೇಜು ಹುಡುಗಿಯರು ಡಿ.ಸಿ ಎದುರು ಮೊರೆ ಇಟ್ಟರೂ ಕಿವಿಗೊಡದ ಮಹಿಳಾ ಡಿ.ಸಿಗೆ ಇದನ್ನೆಲ್ಲ ಬಿಡಿಸಿ ಹೇಳುವವರುಯಾರು?’ ಎಂದು ಪ್ರಶ್ನಿಸಿದಾಗ ಪತ್ರಕರ್ತರು ಉತ್ತರಿಸಲಾಗದೆ ಪೇಚಿಗೆ ಸಿಲುಕಿದರು.