ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿಧಾಮ: ನಿಯಮ ಉಲ್ಲಂಘಿಸಿ ಛಾಯಾಗ್ರಹಣ

Last Updated 9 ಏಪ್ರಿಲ್ 2017, 20:08 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿಗೆ ಸಮೀಪದ ದರೋಜಿ ಕರಡಿಧಾಮದಲ್ಲಿ ನಿಯಮ ಉಲ್ಲಂಘಿಸಿ ಛಾಯಾಗ್ರಹಣ ಮಾಡಿ, ಕರಡಿಗಳಿಗೆ ಕಿರಿಕಿರಿ ಉಂಟು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದೇ 7ರ ಸಂಜೆ 4 ರಿಂದ 6.30ರ ನಡುವೆ ಈ ಪ್ರಕರಣ ನಡೆದಿದೆ. ದೀಪಂಕರ ಮುಜುಂದಾರ್‌, ಯಶಪಾಲ್‌ ರಾಥೋಡ್‌ ಎನ್ನುವವರು ಛಾಯಾಗ್ರಹಣ ಮಾಡಿದ್ದಾರೆ.

ಕರಡಿಗುಡ್ಡದಿಂದ ಸುಮಾರು 500 ಮೀಟರ್‌ ದೂರದಲ್ಲಿ ಸಾರ್ವಜನಿಕರಿಗೆ ಕರಡಿಗಳ ವೀಕ್ಷಣೆಗೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಯಾರೇ ವಿಡಿಯೊ, ಛಾಯಾಚಿತ್ರ ತೆಗೆಯಬೇಕಾದರೆ ಆ ಸ್ಥಳದಲ್ಲಿ ನಿಂತುಕೊಂಡೇ ತೆಗೆಯಬೇಕು. ಕರಡಿಗುಡ್ಡದ ಬಳಿ ಹೋಗಲು ಯಾರಿಗೂ ಅನುಮತಿ ಇಲ್ಲ.

ಆದರೆ, ಅಂದು ಸಂಜೆ ಕರಡಿಗುಡ್ಡದವರೆಗೆ ಹೋಗಲು ದೀಪಂಕರ, ಯಶಪಾಲ್‌ ಅವರಿದ್ದ ಕಾರಿಗೆ ಅವಕಾಶ ಕಲ್ಪಿಸಲಾಗಿದೆ. ಕರಡಿಧಾಮದ ಸಿಬ್ಬಂದಿ ಕೂಡ ನೆರವಾಗಿದ್ದಾರೆ ಎಂದು ಆ ಸಂದರ್ಭದಲ್ಲಿ ಅಲ್ಲಿದ್ದ ವನ್ಯಜೀವಿ ಛಾಯಾಗ್ರಾಹಕರಾದ ಮಂಜಪ್ಪ, ಹರಿನಾರಾಯಣ ಹಾಗೂ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಛಾಯಾಗ್ರಾಹಕ ಎಂ.ಆರ್‌. ಮಂಜುನಾಥ್‌ ಸಹ ಸ್ಥಳದಲ್ಲಿದ್ದರು.

‘ಕರಡಿಗುಡ್ಡದ ಮೇಲೆ ಕರಡಿಗಳು ಬರುವ ಸ್ಥಳದಲ್ಲಿಯೇ ರಿಮೋಟ್‌ಚಾಲಿತ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ತಾಯಿ ಕರಡಿಯು ಮರಿಗಳೊಂದಿಗೆ ಬರುತ್ತಿದ್ದಂತೆಯೇ ಛಾಯಾಚಿತ್ರ ತೆಗೆಯಲು ಆರಂಭಿಸಿದ್ದಾರೆ. ಕ್ಯಾಮೆರಾ ಫ್ಲ್ಯಾಶ್‌ ಹಾಗೂ ಅದರ ಶಬ್ದಕ್ಕೆ ಕರಡಿಗಳು ಹೆದರಿವೆ. ಮರಿ ಕರಡಿಗಳು ಭಯದಿಂದ ತಾಯಿ ಕರಡಿಯನ್ನು ಅಪ್ಪಿಕೊಂಡು ಕೆಲಕಾಲ ಕ್ಯಾಮೆರಾವನ್ನೇ ಮಿಟುಕಿಸಿ ನೋಡಿ ಅಲ್ಲಿಂದ ಓಡಿ ಹೋದವು’ ಎಂದು ಹರಿನಾರಾಯಣ ತಿಳಿಸಿದರು.

‘ಈ ಕುರಿತು ಕರಡಿಧಾಮದ ಸಿಬ್ಬಂದಿ ಬಳಿ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಛಾಯಾಚಿತ್ರ ಸೆರೆಹಿಡಿದವರು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಎಫ್‌.ಒ) ತಕತ್‌ ಸಿಂಗ್‌ ರಣಾವತ್‌ ಅವರ ಆಪ್ತರು ಎನ್ನುವುದು ಬಳಿಕ ತಿಳಿಯಿತು. ಹಲವು ವರ್ಷಗಳಿಂದ ವನ್ಯಜೀವಿಗಳ ಛಾಯಾಚಿತ್ರಗಳನ್ನು ನಾವು ಸೆರೆಹಿಡಿಯುತ್ತಿದ್ದೇವೆ. ಆದರೆ, ಪ್ರಾಣಿಗಳಿಗೆ ಕಿರಿಕಿರಿಯಾಗುವ ರೀತಿಯಲ್ಲಿ ಎಂದೂ ಫೋಟೋಗ್ರಫಿ ಮಾಡಿಲ್ಲ. ಈ ರೀತಿ ಮಾಡುವುದು ತಪ್ಪು. ಅದಕ್ಕೆ ಆಸ್ಪದ ಮಾಡಿಕೊಟ್ಟಿರುವುದು ಅದಕ್ಕಿಂತಲೂ ದೊಡ್ಡ ತಪ್ಪು’ ಎಂದರು.

ಈ ಕುರಿತು ಡಿ.ಎಫ್‌.ಒ ತಕತ್‌ ಸಿಂಗ್‌ ರಣಾವತ್‌ ಅವರನ್ನು ಪ್ರಶ್ನಿಸಿದರೆ, ‘ದೀಪಂಕರ್‌, ಯಶಪಾಲ್‌ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಛಾಯಾಚಿತ್ರಕ್ಕೆ ಅವಕಾಶ ಮಾಡಿಕೊಡಬೇಕೆಂದು ಯಾರಿಗೂ ನಾನು ಹೇಳಿಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಒಂದುವೇಳೆ ಯಾರಾದರೂ ನನ್ನ ಹೆಸರು ಹೇಳಿಕೊಂಡು ಕಾನೂನು ಉಲ್ಲಂಘಿಸಿದ್ದರೆ ಅವರ ವಿರುದ್ಧ ಕ್ರಮ   ಜರುಗಿಸಲಾಗುವುದು’ ಎಂದು ಹೇಳಿದರು.

‘ಪ್ರಾಣಿಗಳ ಚಲನವಲನಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ಫೋಟೋಗ್ರಫಿಯೇ ಸೂಕ್ತ. 2–3 ಕಿ.ಮೀ ದೂರದಲ್ಲಿ ಇದ್ದುಕೊಂಡು ಅಧ್ಯಯನ ಮಾಡಲು ಆಗುವುದಿಲ್ಲ. ಅಧ್ಯಯನದ ಉದ್ದೇಶಕ್ಕೆ ಕೆಲವರಿಗೆ ವೀಕ್ಷಣಾ ಗೋಪುರದ ಬಳಿಯಿಂದ ಛಾಯಾಚಿತ್ರ ತೆಗೆಯಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯಾಧಿಕಾರಿ (ಆರ್‌.ಎಫ್‌.ಒ) ಭಾಸ್ಕರ್‌ ತಿಳಿಸಿದರು.
* * *
ಯಾರೋ, ಏನೋ ಹೇಳಿದರೆಂದು ಸುಮ್ಮನೆ ವರದಿ ಮಾಡಬೇಡಿ. ಹಾಗೇನಾದರೂ ಮಾಡಿದರೆ ನಿಮ್ಮ ವಿರುದ್ಧ  ನಿಮ್ಮ ಸಂಪಾದಕರಿಗೆ ದೂರು ಕೊಡಬೇಕಾಗುತ್ತದೆ
ತಕತ್‌ ಸಿಂಗ್‌ ರಣಾವತ್‌
ಡಿ.ಎಫ್‌.ಒ
ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT