ಮಾಲೂರು: ‘ಜಿಲ್ಲೆಯಲ್ಲಿ ‘ಬಾಹುಬಲಿ–2’ ಚಲನ ಚಿತ್ರವನ್ನು ಬಿಡುಗಡೆ ಮಾಡಬಾರದು ಹಾಗೂ ಕನ್ನಡಿಗರನ್ನು ಹೀಯಾಳಿಸಿರುವ ಚಿತ್ರದ ಪ್ರಮುಖ ನಟ ಸತ್ಯರಾಜ್ ಅವರ ನಡೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಕಾರ್ಯಕರ್ತರು ಪಟ್ಟಣದ ಮಾರಿಕಾಂಬ ವೃತ್ತದಲ್ಲಿ ಭಾನುವಾರ ಧರಣಿ ನಡೆಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ‘ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹೋರಾಟಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರರ ಬಗ್ಗೆ ತುಚ್ಛವಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ಕೇವಲ ಒಂದು ಪ್ರಾಂತ್ಯಕ್ಕೆ ಹಾಗೂ ಒಂದು ಭಾಷೆಯ ಕಲಾವಿದ ಎಂದು ಸಾಬೀತು ಪಡೆಸಿದ್ದಾರೆ. ಕನ್ನಡಿಗರ ಸ್ವಾಭಿಮಾನ ಕೆಣಕಿ ನಾಡಿಗೆ ಸವಾಲು ಎಸೆದಿರುವುದು ಕನ್ನಡಿಗರ ಸ್ವಾಭಿಮಾನ ಕೆಣಕಿದಂತಾಗಿದೆ’ ಎಂದು ಹೇಳಿದರು.
‘ರಾಜ್ಯದ ಯಾವುದೇ ವಿತರಕರು ಅವರು ನಟಿಸಿದ ಚಿತ್ರಗಳನ್ನು ವಿತರಣೆ ಮಾಡಬಾರದು. ಒಂದು ವೇಳೆ ಚಿತ್ರ ಖರೀದಿಸಿದರೆ ಅಂತಹವರನ್ನು ಕನ್ನಡ ವಿರೋಧಿಗಳೆಂದು ಭಾವಿಸಬೇ ಕಾಗುತ್ತದೆ. ಯಾವುದೇ ಕಾರಣಕ್ಕೂ ಬಾಹುಬಲಿ –2 ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತರು ಅವಕಾಶ ನೀಡುವುದಿಲ್ಲ’ ಎಂದರು.
ಕರವೇ ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೊಪ್ಪ ಚಂದ್ರು, ಕಿಂಗ್ಸ್ ಮೂರ್ತಿ, ಆನಂದ್, ದೊಡ್ಡ ಕಡತೂರು ಮಂಜು, ಮಾಸ್ತಿ ಶ್ರೀನಿವಾಸ್, ಮಂಜು, ಗಣೇಶ್, ಮಹೇಶ್, ರಾಜು, ಪಾಪಿರೆಡ್ಡಿ, ವೇಣು, ಕೆ.ರಮೇಶ್, ಶ್ರೀನಿವಾಸ್ ಶೆಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.