ಶನಿವಾರಸಂತೆ: ಮಳೆಗಾಗಿ ಪ್ರಾರ್ಥಿಸಲು ಶ್ರೀಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿಯ ನೇತೃತ್ವದಲ್ಲಿ ಸೋಮವಾರ ಸದಸ್ಯರು ಮಾಲಂಬಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡರು.ಪಟ್ಟಣ ಹಾಗೂ ಹೋಬಳಿಯಾದ್ಯಂತ ಈವರೆಗೆ ಉತ್ತಮ ಮಳೆಯಾಗದ ಕಾರಣ ಕೈಗೊಂಡ ಪಾದಯಾತ್ರೆ ಚಂದ್ರಮೌಳೇಶ್ವರ–ಪಾರ್ವತಿ–ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾಯಿತು.
ನಂದಿಗುಂದ ಗ್ರಾಮವರೆಗೆ ಮಂಗಳವಾದ್ಯದ ಜೊತೆಗೆ ಮೆರವಣಿಗೆಯಲ್ಲಿ ಸಾಗಿದ ಸುಮಾರು 80 ಮಂದಿ ಭಕ್ತರು ಬಳಿಕ ಬೆಟ್ಟ ಏರಿದರು.ಬೆಟ್ಟದ ಮೇಲಿನ ಮಳೆಮಲ್ಲೇಶ್ವರ ದೇವಾಲಯದಲ್ಲಿ ಗಣಪತಿಗೆ ಪೂಜೆ, ಮಳೆಮಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಿ ಮಳೆಗೆ ಪ್ರಾರ್ಥಿಸಿದರು.
ಅರ್ಚಕರಾದ ನಾಗೇಶ್ ಭಟ್, ಚಂದ್ರಶೇಖರ್ ಹಾಗೂ ಲಿಂಗರಾಜ್ ಪೂಜೆ ನಡೆಸಿಕೊಟ್ಟರು. ಅನ್ನಸಂತರ್ಪಣೆ ನಡೆಯಿತು.ಕಾಕತಾಳೀಯ ಎಂಬಂತೆ ಪೂಜೆ ಬಳಿಕ ಬೆಟ್ಟ ಇಳಿಯುವಾಗ ತುಂತುರು ಮಳೆ ಸುರಿದಿದ್ದು, ಪಾದಯಾತ್ರಿಗಳು ಹರ್ಷಚಿತ್ತರಾದರು. ಸಮಿತಿಯ ಜಯಪ್ಪಣ್ಣ, ಮೋಹನ್ ಕುಮಾರ್, ರಾಜಶೇಖರ್, ಅಶೋಕ್ ನೇತೃತ್ವ ವಹಿಸಿದ್ದರು.