ಗುಂಡ್ಲುಪೇಟೆ: ತಾಲ್ಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಕೋಡಿಬಸವೇಶ್ವರ ಸ್ವಾಮಿಯ ಜಾತ್ರೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.ಜಾತ್ರೆ ನಿಮಿತ್ತ ಮನೆಗಳನ್ನು ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಹೊರವಲಯದ ಕೋಡಿಬಸವೇಶ್ವರ ದೇಗುಲ ಶುಚಿಗೊಳಿಸಿ, ಬಣ್ಣ ಬಳಿಸ ಲಾಗಿತ್ತು.
ಹೂವುಗಳಿಂದ ಅಲಂಕೃತ ರಥದಲ್ಲಿ ಉತ್ಸವಮೂರ್ತಿ ಇರಿಸಿ ಮಹಾ ಮಂಗಳಾರತಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ವಾದ್ಯಗೋಷ್ಠಿ, ನಂದಿಧ್ವಜ, ಕಂಸಾಳೆ, ಛತ್ರಿ, ಚಾಮರ, ವೀರಭದ್ರ ಕುಣಿತ ಇತರೆ ಕಲಾ ತಂಡಗಳೊಂದಿಗೆ ರಥವನ್ನು ಭಕ್ತರು ಮುಂದೆ ಎಳೆದು ಸಾಗಿದರು.
ಗ್ರಾಮದಿಂದ 2 ಕಿ.ಮೀ ದೂರದ ಕೋಡಿಬಸವೇಶ್ವರ ದೇವಾಲಯದ ವರೆಗೆ ಭಕ್ತರು ದೊಡ್ಡಗಾತ್ರದ ಹಗ್ಗ ಕಟ್ಟಿ ರಥವನ್ನು ಎಳೆದರು.ಬೇಸಿಗೆ ಬಿಸಿ ಲೆಕ್ಕಿಸದೇ ಭಕ್ತರು ರಥ ಎಳೆದು ಭಕ್ತಿ ಮೆರೆದರು. ವಿವಿಧ ಗ್ರಾಮ ಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.