ತುಮಕೂರು: ಶಿರಾ ಪಟ್ಟಣದಲ್ಲಿ ಏ.16ರಂದು ಸಾಮೂಹಿಕ ವಿವಾಹ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹಾಗೂ ಅವರ ಸ್ನೇಹಿತರ ಬಳಗ ಏರ್ಪಡಿಸಿದೆ.
‘ವಿವೇಕಾನಂದ ಕ್ರೀಡಾಂಗಣದಲ್ಲಿ ಅಂದು ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ತಿರುಪತಿಯಿಂದ ಉತ್ಸವ ಮೂರ್ತಿಗಳನ್ನು ಕರೆಸಲಾಗುತ್ತಿದೆ. ಅದಕ್ಕಾಗಿ ₹1 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದು ಹೇಳಲಾಗುತ್ತಿದೆ.
ಏ.17 ರಂದು ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ವತಿಯಿಂದ ಮಧುರ ಮಧುರವೀ ಮಂಗಳಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ವ್ಯಯಿಸುವ ಹಣದ ಕುರಿತು ಪ್ರತಿಕ್ರಿಯೆ ಪಡೆಯಲು ಜಯಚಂದ್ರ ಅವರನ್ನು ಸಂಪರ್ಕಿಸಿದಾಗ ಮಾಹಿತಿ ನೀಡಲು ನಿರಾಕರಿಸಿದರು.
‘ಬಡವರಿಗೆ ಒಳ್ಳೆಯದಾಗಲಿ ಎಂದು ಸಾಮೂಹಿಕ ವಿವಾಹ ಮಾಡುತ್ತಿದ್ದೇವೆ. ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸುತ್ತಿದ್ದೇವೆ. ಬೆಂಗಳೂರು ಹಾಗೂ ಸ್ಥಳೀಯ ಸ್ನೇಹಿತರು, ಹಿತೈಷಿಗಳು ಸೇರಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕೆಲವರು ಧಾನ್ಯ, ವಸ್ತ್ರ ನೀಡುತ್ತಿದ್ದಾರೆ. ಇದರ ಲೆಕ್ಕ ಕೊಡುವ ಅಗತ್ಯವಿಲ್ಲ. ಅನಗತ್ಯ ವಿವಾದ ಸೃಷ್ಟಿಸುವುದು ಬೇಡ’ ಎಂದು ಹೇಳಿದರು.
ಬರದಲ್ಲೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.