ಚಿಂತಾಮಣಿ: ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ವಿದ್ಯಾಭ್ಯಾಸಕ್ಕೆ ಕಷ್ಟವಾಗುತ್ತಿದೆ ಎಂದು ಸರ್ಕಾರಿ ಬಾಲಕರ ಕಾಲೇಜಿನ ಉಪನ್ಯಾಸಕಿ ನಂದಿನಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಹಿರಿಯ ನಾಗರಿಕರ ವೇದಿಕೆಯು ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಪಠ್ಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಲೆಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸಿ ಜೀವನ ರೂಪಿಸಬೇಕು. ಸರ್ಕಾರಿ ಶಾಲೆ ಮುಚ್ಚುವುದರಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ’ ಎಂದರು. ‘ಪೋಷಕರು ಮಕ್ಕಳನ್ನು ಬೆಳೆಸುವಾಗ ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಲು ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.
ನಿವೃತ್ತ ಶಿಕ್ಷಕ ರೆಡ್ಡಪ್ಪಾಚಾರ್ ಹಳಗನ್ನಡ ಕಾವ್ಯದ ‘ಅಭಿಜ್ಞಾನ ಶಾಕುಂತಲ’ ನಾಟಕದ ಪ್ರಸಂಗವನ್ನು ವಿವರಿಸಿದರು. ವಿವಿಧ ಕಾಯಿಲೆಗಳ ಕ್ರಮಗಳ ಕುರಿತು ಡಾ.ವರದರಾಜನ್ ಅರಿವು ಮೂಡಿಸಿದರು.
ನಿವೃತ್ತ ಶಿಕ್ಷಕ ಅಪ್ಪಾಜಿರೆಡ್ಡಿ, ವೇದಿಕೆಯ ಕಾರ್ಯದರ್ಶಿ ವೆಂಕಟರಮಣ, ಗೌರವಾಧ್ಯಕ್ಷ ಟಿ.ರಾಮಪ್ಪ, ಕಾಗತಿ ವೆಂಕಟರತ್ನಂ, ಕಾರ್ಯಾಧ್ಯಕ್ಷ ಅಪ್ಪಾಜಿರೆಡ್ಡಿ, ಶಿಕ್ಷಕ ವೆಂಕಟರಮಣಪ್ಪ, ನರಸಿಂಹಮೂರ್ತಿ, ಹನುಮಂತಪ್ಪ, ರಾಮಕೃಷ್ಣಾರೆಡ್ಡಿ ಭಾಗವಹಿಸಿದ್ದರು.