ಚಿಂತಾಮಣಿ: ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ಕೊಡಿಸುವುದು, ಮಾನವೀಯ ಮೌಲ್ಯಗಳನ್ನು ಕಲಿಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಆರ್.ನಟೇಶ್ ಸಲಹೆ ನೀಡಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಮಂಗಳವಾರ ನಗರದ ತಪತೇಶ್ವರ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ‘ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986’ ಕುರಿತು ನಡೆದ ಕಾನೂನು ಅರಿವು– ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮುದ್ರದ ಅಲೆಗಳಂತೆ ಜೀವನದಲ್ಲಿ ಕಷ್ಟ-ಸುಖ, ಸಿಹಿ-ಕಹಿ ಅನುಭವಗಳನ್ನು ಅನುಭವಿಸುತ್ತಲೇ ಮುಂದೆ ಸಾಗಬೇಕಾಗಿದೆ. ಮಕ್ಕಳನ್ನು ದುಡಿಮೆಗೆ ದೂಡುವುದು ಅಪರಾಧವೆಂದು ಗೊತ್ತಿದ್ದರೂ ಅವರನ್ನು ಕೆಲಸಗಳಿಗೆ ಕಳುಹಿಸಿ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜೀವನದಲ್ಲಿ ಬಾಲ್ಯ, ಪ್ರೌಢ, ಯೌವನ ಹಾಗೂ ವೃದ್ಯಾಪ್ಯ ಎಂಬ ನಾಲ್ಕು ಪ್ರಮುಖ ಘಟ್ಟಗಳಿರುತ್ತವೆ. ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಮುಗಿಸಿದಾಗ ಜೀವನ ಸಾರ್ಥಕವಾಗುತ್ತದೆ. ಬಾಲ್ಯದಲ್ಲಿ ಕಲಿತಿದ್ದು ಜೀವನ ಪೂರ್ತಿ ನೆನಪಿರುತ್ತದೆ. ಜೀವನದ ಬುನಾದಿಯಾದ ಬಾಲ್ಯವನ್ನು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡರೆ ಇತರೆ 3 ಹಂತಗಳು ಸುಲಭವಾಗಿ ಸಾಗಿಸಬಹುದು’ ಎಂದು ಕಿವಿಮಾತು ಹೇಳಿದರು.
‘ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ, ಉಜ್ವಲ ಭವಿಷ್ಯವನ್ನು ನೀಡಬೇಕು ಎಂದು ಸಲಹೆ ಹೇಳಿದರು. ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಕಾರ್ಯದರ್ಶಿ ವೆಂಕಟರಮಣರೆಡ್ಡಿ, ಸರ್ಕಾರಿ ಸಹಾಯಕ ಅಭಿಯೋಜಕ ಗುರುಸ್ವಾಮಿ, ಪೌರಾಯುಕ್ತ ಮುನಿಸ್ವಾಮಿ, ಕಾರ್ಮಿಕ ನಿರೀಕ್ಷಕ ವಿಶ್ವನಾಥ್, ತಾಲ್ಲೂಕು ಶಿರಸ್ಥೇದಾರ್ ಅಣ್ಣಪ್ಪ, ಶಿಕ್ಷಣ ಇಲಾಖೆಯ ನಾಗರಾಜ್, ವಕೀಲರಾದ ನಾರಮಾಕಲಹಳ್ಳಿ ಶ್ರೀನಿವಾಸ್, ರಾಜೇಶ್, ಅಶ್ವತ್ಥಪ್ಪ, ಸುಧಾಕರ್, ದಯಾನಂದ್, ಶೋಭಾ ಭಾಗವಹಿಸಿದ್ದರು.