ಕೊಳ್ಳೇಗಾಲ: ನಗರದ ಪೀಸ್ಪಾರ್ಕ್ ಬಳಿಯ ಬಣ್ಣಾರಿ ಮಾರಮ್ಮ ದೇವಾಲಯ ದಲ್ಲಿ ಮಂಗಳವಾರ ಬಣ್ಣಾರಿ ಮಾರಿಯಮ್ಮ ಅಗ್ನಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.ನಗರದ ಈಶ್ವರ ದೇವಾಲಯದ ಚಂದ್ರ ಪುಷ್ಕರಣಿಯಲ್ಲಿ ಬಣ್ಣಾರಿ ಮಾರಮ್ಮ ಉತ್ಸವಮೂರ್ತಿ ಮತ್ತು ಸಪ್ತ ಕನ್ನಿಕೆಯರ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ನೂರಾರು ಮಹಿಳೆಯರು ವಿಶೇಷ ಉಡುಪು ಧರಿಸಿ, ಕೊರಳಿಗೆ ಪುಷ್ಪಮಾಲೆ ಹಾಕಿ, ಕೆಲವರು ಬಾಯಿಬೀಗ ಹಾಕಿ ಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ಕಾವೇರಿ ರಸ್ತೆ, ಕನ್ನಿಕಾ ಪರಮೇಶ್ವರಿ ರಸ್ತೆ, ಮಸೀದಿ ವೃತ್ತ ಡಾ. ಅಂಬೇಡ್ಕರ್ ರಸ್ತೆ ಮೂಲಕ ಮೆರವಣಿಗೆ ಸಾಗಿ ಬಣ್ಣಾರಿ ಮಾರಮ್ಮ ದೇವಾಲಯ ತಲುಪಿತು.
ದೇವಾಲಯದ ಮುಂಭಾಗ ಹಾಕ ಲಾಗಿದ್ದ ಅಗ್ನಿಕೊಂಡವನ್ನು ಪ್ರಧಾನ ಅರ್ಚಕರು ಹಾಯುವ ಮೂಲಕ ಅಗ್ನಿಕೊಂಡ ಪ್ರವೇಶಕ್ಕೆ ಚಾಲನೆ ನೀಡ ಲಾಯಿತು.ಮಹಿಳೆಯರು ಮಕ್ಕಳು ಪುರುಷರು ಸೇರಿ ನೂರಾರು ಜನರು ನಿರಂತರವಾಗಿ 1 ಗಂಟೆವರೆಗೂ ಕೊಂಡ ಹಾಯುವ ಮೂಲಕ ಎಲ್ಲರ ಗಮನ ಸೆಳೆದರು.
ನವಜಾತ ಶಿಶು ಹೊತ್ತ ವ್ಯಕ್ತಿ ಯೋರ್ವ ಕೊಂಡ ಹಾಯುವ ಮೂಲಕ ಎಲ್ಲರ ಗಮನ ಸೆಳೆದರು. ಮಹಿಳೆಯರು, ಮಕ್ಕಳು ಕೊಂಡೋತ್ಸವದ ಸುತ್ತ ಜಮಾಯಿಸಿ ಕೊಂಡಹಾಯುವುದನ್ನು ಕಣ್ತುಂಬಿಕೊಂಡರು.ದೇವಾಲಯದಲ್ಲಿ ವಿಶೇಷ ಪೂಜೆ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಬಾಯಿಬೀಗ: ಏಪ್ರಿಲ್ 12ರಂದು ಬಾಯಿಬೀಗ ಉತ್ಸವ ನೆರವೇರಲಿದೆ.ಬೆಳಿಗ್ಗೆ ಈಶ್ವರ ದೇವಾಲಯದಿಂದ ಬಾಯಿಬೀಗ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.