ಗಂಗಾವತಿ: ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ನಗರದ ಸುಮಾರು 3,212 ಪಡಿತರ ಚೀಟಿಗಳ ಅಂದಾಜು 12,944 ಜನರು ‘ಅನ್ನಭಾಗ್ಯ’ ಯೋಜನೆ ಯಿಂದ ವಂಚಿತರಾಗುವ ಸ್ಥಿತಿ ಬಂದಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಕ ನೀಡಿರುವ ಆಹಾರ ದಾಸ್ತಾನಿನ ಅಂಕಿಅಂಶಗಳನ್ನು ಇಲಾಖೆ ಯ ಅಧಿಕಾರಿಗಳು ನಗರದ ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿ ಕುಳಿತು ಬದಲಿಸಿರುವುದು ಫಲಾನುಭವಿಗಳು ಯೋಜನೆಯಿಂದ ವಂಚಿತವಾಗಲು ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
‘ಇಲಾಖೆ ನೀಡಿದ ಆಹಾರದ ಪ್ರಮಾಣವನ್ನು ತಗ್ಗಿಸುವ ಮೂಲಕ ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಫಲಾನುಭವಿಗಳಿಗೆ ಅನ್ನ ಸಿಗದಂತೆ ಮಾಡಿದ್ದಾರೆ’ ಎಂದು ನಗರದ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಆರೋಪಿಸಿದ್ದಾರೆ.
ಫೆಬ್ರುವರಿ ತಿಂಗಳಲ್ಲಿ ಪಡಿತರ ಫಲಾನುಭವಿಗಳು ಇಂಟರ್ನೆಟ್ನಿಂದ ಕೂಪನ್ ಡೌನ್ಲೋಡ್ ಮಾಡಿ ನ್ಯಾಯಬೆಲೆ ಅಂಗಡಿಯಲ್ಲಿ ಸಲ್ಲಿಸಿರುವ ಪ್ರಮಾಣವನ್ನೆ ಮಾನ ದಂಡ ವಾಗಿಟ್ಟುಕೊಂಡಿರುವ ಆಹಾರ ಇಲಾಖೆ, ಅದರ ಆಧಾರದ ಮೇಲೆ ಏಪ್ರಿಲ್ ತಿಂಗಳ ಅಕ್ಕಿ ನೀಡಿದೆ.
ನಗರದ 24 ನ್ಯಾಯಬೆಲೆ ಅಂಗಡಿಗಳಲ್ಲಿ ಒಟ್ಟು 22,971 ಪಡಿತರ ಚೀಟಿಗಳಿವೆ. ಈ ಪೈಕಿ ಫೆಬ್ರುವರಿಯಲ್ಲಿ 18,900 ಜನ ಕೂಪನ್ ಪಡೆದು ಕೊಂಡಿದ್ದು, 18,511 ಪಡಿತರದಾರರು ಕೂಪನ್ ಸಲ್ಲಿಸಿ ಆಹಾರ ಪದಾರ್ಥ ಪಡೆದುಕೊಂಡಿದ್ದಾರೆ.ಇದರ ಆಧಾರದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಒಟ್ಟು 22,971 ಪಡಿತರ ಚೀಟಿಗಳ ಪೈಕಿ 19,759 ಚೀಟಿಗಳಿಗೆ ಮಾತ್ರ ಆಹಾರ ಮಂಜೂರು ಮಾಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿಯನ್ನು ಸರ್ಕಾರ ನೀಡಿದ್ದು, ಅಧಿಕಾರಿಗಳು ಮಾಡಿದ ಪ್ರಮಾದದಿಂದ ನಗರವೊಂದರಲ್ಲಿಯೇ 3,212 ಪಡಿತರಚೀಟಿಯ ಸುಮಾರು 12,944 ಜನರು ಅನ್ನಭಾಗ್ಯದಿಂದ ವಂಚಿತ ರಾಗಿದ್ದಾರೆ.ನಗರದ 24 ನ್ಯಾಯಬೆಲೆ ಅಂಗಡಿ ಯ ಪೈಕಿ ಪ್ರಭಾವಿಗಳು, ರಾಜಕೀಯ ವ್ಯಕ್ತಿಗಳಿಗೆ ಸೇರಿದ ನ್ಯಾಯಬೆಲೆ ಅಂಗಡಿಗಳಿಗೆ ಫೆಬ್ರುವ ರಿಯಲ್ಲಿ ಸಲ್ಲಿಸಿದ ಕೂಪನ್ ಪ್ರಮಾಣ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ನೀಡಿರುವ ಮಾಹಿತಿ ಲಭಿಸಿದೆ.
‘ನಗರದ 5ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಯಲ್ಲಿ ತಲಾ 150 ರಿಂದ 200 ಪಡಿತರ ಚೀಟಿಗೆ ಆಹಾರಧಾನ್ಯ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಕೇಳಿದರೆ ಫಲಾನು ಭವಿಗಳು ಅರ್ಹತಾ ಪತ್ರ ತಂದು ಕೊಡ ಬೇಕು ಎನ್ನುತ್ತಾರೆ. ಎಲ್ಲಿಂದ ತರಬೇಕು ಎಂಬ ಮಾಹಿತಿ ನೀಡುತ್ತಿಲ್ಲ’ ಎಂದು ಅಂಬೇಡ್ಕರ್ ನಗರದ ಫಲಾನುಭವಿ ಶ್ರೀಕಾಂತ್ ಅಸಮಾಧಾನ ವ್ಯಕ್ತಪ ಡಿಸಿದ್ದಾರೆ.
ನಗರದ 24 ನ್ಯಾಯಬೆಲೆ ಅಂಗಡಿ ಗಳ ಪೈಕಿ ಕೇವಲ ನಾಲ್ಕೈದು ಅಂಗಡಿಗಳ ಮಾಲೀಕರು ಮಾತ್ರ ಏಪ್ರಿಲ್ ತಿಂಗಳ ಆಹಾರಧಾನ್ಯವನ್ನು ಗೋದಾಮಿನಿಂದ ಎತ್ತುವಳಿ ಮಾಡಿ ದ್ದಾರೆ. ಮಿಕ್ಕವರು ಆಹಾರ ಇಲಾಖೆಯ ಈ ತಾರತಮ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಆಹಾರ ಎತ್ತಲು ನಿರಾಕರಿಸಿದ್ದಾರೆ.
‘ಈ ಮೊದಲು ನ್ಯಾಯಬೆಲೆ ಅಂಗಡಿಯಲ್ಲಿ ಉಪ್ಪು, ಅಕ್ಕಿ, ಗೋಧಿ, ಸಕ್ಕರೆ, ಹೆಸರು, ಎಣ್ಣೆ, ಸೀರೆ, ಲುಂಗಿ, ಧೋತ್ರದಂಥ ವಸ್ತು ನೀಡಲಾಗುತ್ತಿತ್ತು. ಆದರೆ, ಹಂತಹಂತವಾಗಿ ಎಲ್ಲವೂ ಸ್ಥಗಿತವಾಗಿದ್ದು, ಈಗ ಅಕ್ಕಿ ನೀಡಲಾ ಗುತ್ತಿತ್ತು. ಈಗ ಅದಕ್ಕೂ ಕೊಕ್ಕೆ ಬಿದ್ದಿದೆ’ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.