ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲ ವಸೂಲಿ: ಎಫ್‌ಐಆರ್ ದಾಖಲಿಸಿ’

ಕಿರು ಹಣಕಾಸು ಸಂಸ್ಥೆಗಳ ಸಾಲ ಮನ್ನಾ ಜಿಲ್ಲಾಡಳಿತದ ಕೈಯಲ್ಲಿಲ್ಲ: ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಸ್ಪಷ್ಟನೆ
Last Updated 13 ಏಪ್ರಿಲ್ 2017, 7:29 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಕಾರಣ ಕಿರು ಹಣಕಾಸು ಸಂಸ್ಥೆ ಸಿಬ್ಬಂದಿ ಬಲವಂತವಾಗಿ ವಸೂಲಿ ಸಾಲ ಮಾಡುವಂತಿಲ್ಲ’ ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ‘ಕಿರುಹಣಕಾಸು ಸಂಸ್ಥೆ ಗಳಿಂದ ಪಡೆದ ಸಾಲ ಮನ್ನಾ ಮಾಡುವ ಅಧಿಕಾರ ತಮಗೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನವನಗರದ ಅಂಬೇಡ್ಕರ್ ಭವನ ದಲ್ಲಿ ಬುಧವಾರ ಪೊಲೀಸ್ ಇಲಾಖೆ ಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಲಿತರ ಸಭೆಯಲ್ಲಿ ಪಾಲ್ಗೊಂಡು ಅಹ ವಾಲು ಆಲಿಕೆ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಲ ಮರು ಪಾವತಿಸುವಂತೆ ಕಿರುಹಣಕಾಸು ಸಂಸ್ಥೆ ಗಳ ಸಿಬ್ಬಂದಿ ಒತ್ತಾಯ ಮಾಡಿದರೆ ಇಲ್ಲವೇ ಮಹಿಳೆಯರೊಂದಿಗೆ ದುರ್ವ ರ್ತನೆ ತೋರಿದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿದರು.

ಪೊಲೀಸರು ಎಫ್‌ಐಆರ್ ದಾಖಲಿಸಿ ಕೊಳ್ಳಲು ನಿರಾಕರಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ ಎಂದರು. ಕಿರುಸಾಲ ವಸೂಲಾತಿಗೆ ಸಂಬಂಧಿಸಿದ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಹರಿಸುವಂತೆ ಎಸ್‌ಪಿ ಸಿ.ಬಿ.ರಿಷ್ಯಂತ್‌ ಅವರಿಗೆ ಸೂಚನೆ ನೀಡಿದರು.

ಸ್ಮಶಾನ ವ್ಯವಸ್ಥೆ ಮಾಡಿ: ಜಿಲ್ಲೆಯ 101 ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಇಲ್ಲ. ಈಗಾಗಲೇ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಮೂಲಕ 34 ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಚಲವಾದಿ ಅವರ ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. 

ಸರ್ಕಾರದ ಸುತ್ತೋಲೆ ಅನ್ವಯ ದಲಿತರಿಗೆ ಪ್ರತ್ಯೇಕ ಸ್ಮಶಾನ ಮಂಜೂರಾತಿ ಸಾಧ್ಯವಿಲ್ಲ. ಸತ್ತ ಮೇಲಾದರೂ ಎಲ್ಲರೂ ಒಂದೇ ಎಂಬ ಭಾವನೆ ಬರಲಿ ಎಂಬ ಕಾರಣಕ್ಕೆ ಸರ್ಕಾರ ಎಲ್ಲಾ ಜಾತಿಯವರಿಗೂ ಸೇರಿ ಸ್ಮಶಾನ ವ್ಯವಸ್ಥೆ ಮಾಡುತ್ತಿದೆ. ಕೆಲವು ಗ್ರಾಮ ಗಳಲ್ಲಿ ಸರ್ಕಾರಿ ಜಾಗ ಇಲ್ಲ. ಖರೀದಿ ಸೋಣ ಎಂದರೆ ಸರ್ಕಾರ ನಿಗದಿಪಡಿಸಿದ ಮೊತ್ತಕ್ಕೆ ಜಮೀನು ಕೊಡಲು ಯಾರೂ ಸಿದ್ಧರಿಲ್ಲ ಎಂದು ಹೇಳಿದರು.

ಜಮಖಂಡಿ ತಾಲ್ಲೂಕು ರಂಜಣಗಿ ಯಲ್ಲಿ ಗಾವಠಾಣಾ ವ್ಯಾಪ್ತಿಯ ಏಳು ಎಕರೆ ಜಮೀನಿನಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಾಗ ಸ್ವಾಧೀನಕ್ಕೆ ಸ್ಥಳ ಪರಿಶೀಲಿಸಲು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.

ದಲಿತ ಪರ ಚಿಂತನೆ, ಕಾಳಜಿ ಪ್ರತಿ ಯೊಬ್ಬ ಅಧಿಕಾರಿಗೆ ಹಾಗೂ ಸಿಬ್ಬಂದಿಗೂ ಬಂದಾಗ ಮಾತ್ರ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗು ದೂರವಾಗಲು ಸಾಧ್ಯ. ಸರ್ಕಾರಿ ಯಂತ್ರದ ಚಾಲಕ ಶಕ್ತಿಯಾದ ಅಧಿಕಾರ ಶಾಹಿಗೆ ದಲಿತ ಪರ ಸಹಾನುಭೂತಿ ಬೇಡ ಬದಲಿಗೆ ಜವಾಬ್ದಾರಿ ನಿರ್ವಹಿಸ ಬೇಕಿದೆ ಎಂದು ಕಿವಿಮಾತು ಹೇಳಿದರು.

ದೂರಿನ ಸೂಕ್ಷ್ಮತೆ ತಿಳಿಯಿರಿ: ‘ಮರಳುಗಾರಿಕೆ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಬೇರೆ ಜಾತಿಯವರ ಮೇಲೆ ಕೇಸ್‌ ಹಾಕುತ್ತಿಲ್ಲ’ ಎಂಬ ದೂರುಗಳು ವ್ಯಕ್ತವಾದವು. ‘ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ದೂರಿನ ಸೂಕ್ಷ್ಮತೆ ಅರಿತು ಕ್ರಮ ಕೈಗೊಳ್ಳುವಂತೆ’ ಬಾಗಲಕೋಟೆ ಉಪವಿಭಾಗದ ಎಎಸ್‌ಪಿ ಹಾಗೂ ಜಮಖಂಡಿ ಡಿವೈಎಸ್‌ಪಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಅಹವಾಲುಗಳ ಸರಣಿ: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ಒಪ್ಪುತ್ತಿಲ್ಲ. ಹೋಟೆಲ್‌ಗಳಲ್ಲಿ ಪ್ರತ್ಯೇಕ ಕಪ್ಪು, ಪ್ಲೇಟ್ ನೀಡುತ್ತಾರೆ. ಒಳಗೆ ಸೇರಿಸುವುದಿಲ್ಲ. ದೇವಸ್ಥಾನಗಳ ಒಳಗೆ ಪ್ರವೇಶಾವಕಾಶವಿಲ್ಲ. ಎಂದು ದಲಿತ ಮುಖಂಡರು ಅಳಲು ತೋಡಿಕೊಂಡರು.

ಹನುಮಂತ ದೇವರ ಓಕುಳಿ ಆಚರಣೆಗೆ ದಲಿತ ಹೆಣ್ಣು ಮಕ್ಕಳ ಬಳಕೆಗೆ ನಿಷೇಧವಿದ್ದರೂ ಮುಧೋಳ ತಾಲ್ಲೂಕು ಮಿರ್ಜಿ ಗ್ರಾಮದಲ್ಲಿ ಓಕುಳಿ ಆಡಲಾಗಿದೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಜಮಖಂಡಿ ತಾಲ್ಲೂಕು ಕುಂಬಾರಹಳ್ಳದಲ್ಲಿ ದಲಿತ ಬಾಲಕನ ಕೊಲೆ ನಡೆದು ಎಫ್‌ಐಆರ್ ದಾಖಲಾಗಿದ್ದರೂ ಗ್ರಾಮಕ್ಕೆ ಇಲ್ಲಿಯವರೆಗೆ ಉಪವಿಭಾಗಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿ ಭೇಟಿ ನೀಡಿಲ್ಲ. ಕೊಲೆಯಾದ ಬಾಲಕನ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೀರಾಪುರ ಗ್ರಾಮದಲ್ಲಿ ಮರಳು ಸಾಗಣೆ ಲಾರಿ, ಟ್ರ್ಯಾಕ್ಟರ್‌ಗಳು ದಲಿತರ ಕೇರಿಯ ಮೂಲಕ ಹಾದು ಹೋಗುತ್ತಿವೆ. ದೂಳಿನಿಂದಾಗಿ ಅಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ.

ಈ ಬಗ್ಗೆ ಕಲಾದಗಿ ಠಾಣೆಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮರಳುಸಾಗಣೆದಾರರ ಪರವಾಗಿ ಪೊಲೀಸರೇ ವಕಾಲತ್ತು ವಹಿಸುತ್ತಾರೆ. ಮರಳುಸಾಗಣೆದಾರರು ದಲಿತ ಕುಟುಂಬಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಮುಖಂಡ ಪೀರಪ್ಪ ಮ್ಯಾಗೇರಿ ಆರೋಪಿಸಿದರು.

‘ಸಮಾಜಕಲ್ಯಾಣ ಇಲಾಖೆ ನಿಷ್ಕ್ರಿಯ’
ಅಸ್ಪೃಶ್ಯತೆ ನಿವಾರಣೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮಾಜಕಲ್ಯಾಣ ಇಲಾಖೆ ಯಾವುದೇ ಜಾಗೃತಿ ಕಾರ್ಯಕ್ರಮ ಕೈಗೊಂಡಿಲ್ಲ. ಇಲಾಖೆ ನಿಷ್ಕ್ರಿಯವಾಗಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆ ಬಗ್ಗೆ ವಿವರಣೆ ನೀಡಲು ಮುಂದಾದ ಅಧಿಕಾರಿ ಶಿವಾನಂದ ಕುಂಬಾರ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕೆರೂರು ಪೊಲೀಸರು ತಮ್ಮ ವಿರುದ್ಧ ಸುಳ್ಳು ಮಾನಭಂಗ ಪ್ರಕರಣ ದಾಖಲಿಸಿದ್ದಾರೆ. ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆ ಎಂದು ವೈ.ಸಿ.ಕಾಂಬಳೆ ಎಂಬುವವರು ಅಲವತ್ತುಕೊಂಡರು.

ಈ ವೇಳೆ ಹುಚ್ಚಯ್ಯ ದಾನಪ್ಪ ಪೂಜಾರ ಎಂಬುವವರು ಕಾಂಬಳೆ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾದರು. ಈ ಘಟನೆ ಮುಖಂಡರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

*
ಹೆಲ್ಮೆಟ್ ಕಡ್ಡಾಯಗೊಳಿಸಿದ ಆದೇಶ 15 ದಿನಗಳಲ್ಲಿ ಶೇ 100 ರಷ್ಟು ಪಾಲನೆಯಾಗುತ್ತದೆ. ಅಸ್ಪೃಶ್ಯತೆ ನಿವಾರಣೆಗೆ 1950ರಲ್ಲಿ ಕಾನೂನು ರಚಿಸಿದ್ದರೂ ಇನ್ನೂ ಜೀವಂತವಾಗಿದೆ.
-ಮಲ್ಲಿಕಾರ್ಜುನ ಚಲವಾದಿ,
ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT