ಮೈಸೂರು: ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ ವಿ.ಶ್ರಿನಿವಾಸಪ್ರಸಾದ್ ಘೋಷಿಸಿದರು.
ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆದೇಶಕ್ಕೆ ತಲೆಬಾಗುತ್ತೇನೆ. ಗೆದ್ದ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವ ವಿಚಾರವನ್ನು ಕಾಂಗ್ರೆಸ್ನಲ್ಲಿ ಇದ್ದಾಗಲೇ ಹೇಳಿದ್ದೆ. ಲೋಕಸಭೆ ಹಾಗೂ ವಿಧಾನಸಭೆಯ 13 ಚುನಾವಣೆ ಎದುರಿಸಿ ಸಾಕಾಗಿದೆ. ಹಿಂದಿನ ನನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದರು.
ಹಣದ ಹೊಳೆ: ಮತದಾನಕ್ಕೆ ಕೊನೆಯ 3 ದಿನ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಣದ ಹೊಳೆ ಹರಿಸಿತು. ಚುನಾವಣೆಯ ಪಾವಿತ್ರ್ಯೆತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವರ ಸಲೆಹೆಗಾರ ಕೆಂಪಯ್ಯ ಪೊಲೀಸರ ಸಮ್ಮುಖದಲ್ಲಿಯೆ 1.20 ಲಕ್ಷ ಮತದಾರರಿಗೆ ಹಣ ಹಂಚಿದ್ದಾರೆ ಎಂದು ದೂರಿದರು.