ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕೃತಕವಾಗಿ ಮಾವು ಮಾಗಿಸುವ ದಂಧೆ

ಗ್ರಾಹಕರ ಉದರ ಸೇರುತ್ತಿರುವ ವಿಷಕಾರಿ ರಾಸಾಯನಿಕ
Last Updated 14 ಏಪ್ರಿಲ್ 2017, 4:58 IST
ಅಕ್ಷರ ಗಾತ್ರ

ಕೋಲಾರ: ಹಣ್ಣುಗಳ ರಾಜ ‘ಮಾವು’ ಹಣ್ಣಿನ ಋತುಮಾನ ಆರಂಭವಾಗುವುದಕ್ಕೂ ಮುನ್ನವೇ ಜಿಲ್ಲೆಯಲ್ಲಿ ಕೃತಕವಾಗಿ ಹಣ್ಣು ಮಾಗಿಸಿ ಮಾರಾಟ ಮಾಡುವ ದಂಧೆ ಶುರುವಾಗಿದ್ದು, ಹಣ್ಣು ಮಾಗಿಸಲು ಬಳಸುವ ವಿಷಕಾರಿ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವು ಸದ್ದಿಲ್ಲದೆ ಗ್ರಾಹಕರ ಉದರ ಸೇರುತ್ತಿದೆ.

ಜಿಲ್ಲೆಯಲ್ಲಿ 48,824 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ಖ್ಯಾತಿ ಪಡೆದಿದೆ. ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಂ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಮಾವಿನ ತಳಿಗಳಿವೆ.

ಜಿಲ್ಲೆಯು ಮಾವು ಬೆಳೆಗೆ ರಾಜ್ಯದಲ್ಲೇ ಹೆಸರಾಗಿದ್ದು, ಸುಮಾರು 80 ಸಾವಿರ ರೈತರು ಮಾವು ಬೆಳೆದಿದ್ದಾರೆ. ಇಲ್ಲಿಂದ ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಅಮೆರಿಕ, ಬಾಂಗ್ಲಾದೇಶ, ಪಾಕಿಸ್ತಾನ, ಯುರೋಪ್‌ ಹಾಗೂ ಅರಬ್‌ ರಾಷ್ಟ್ರಕ್ಕೆ ಪ್ರತಿ ವರ್ಷ ಟನ್‌ಗಟ್ಟಲೇ ಮಾವಿನ ಹಣ್ಣು ರಫ್ತಾಗುತ್ತದೆ.

‘ಜಿಲ್ಲೆಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳ ಅಂತ್ಯದಲ್ಲಿ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಮಾರಾಟ ಆರಂಭವಾಗುತ್ತದೆ. ಆದರೆ, ವರ್ತಕರು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ  ಎಂ.ಎಸ್‌.ರಾಜು ತಿಳಿಸಿದರು.

ಆಂಧ್ರದ ಕಾಯಿ: ‘ನೆರೆಯ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಮಾವಿನ ಕಾಯಿ ಖರೀದಿಸಿಕೊಂಡು ಬಂದು ಕೃತಕವಾಗಿ ಮಾಗಿಸುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ. ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದ ಅಂಗಡಿ ಹಾಗೂ ತಳ್ಳು ಗಾಡಿಗಳಲ್ಲಿ ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆ. ಈ ಹಣ್ಣುಗಳ ಬೆಳೆ ಕೆ.ಜಿ ₹ 40 ಇದೆ. ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತಿವೆ.

ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಇವು ಹೆಚ್ಚು ರುಚಿಕರ ವಾಗಿರುವುದಿಲ್ಲ’ ಎಂದು ಎಂ.ಎಸ್‌. ರಾಜು ಸ್ಪಷ್ಟಪಡಿಸಿದರು.
‘ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ. ಜತೆಗೆ ಈ ಹಣ್ಣುಗಳು ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಬಾಳಿಕೆ ಅವಧಿ ತುಂಬಾ ಕಡಿಮೆ.

ಈ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೂ ಕೃತಕವಾಗಿ ಮಾಗಿಸಿದ ಹಣ್ಣುಗಳ ಆಕರ್ಷಣೆಗೆ ಮಾರು ಹೋಗುತ್ತಿರುವ ಗ್ರಾಹಕರು ದುಡ್ಡು ಕೊಟ್ಟು ಈ ಹಣ್ಣುಗಳನ್ನು ಖರೀದಿಸಿ ತಿಂದು ಕಾಯಿಲೆ ಬೀಳುತ್ತಿದ್ದಾರೆ’ ಎಂದು ವಿವರಿಸಿದರು.

ವಿಷಕಾರಿ ಅಂಶ: ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವು ಆರ್ಸೆನಿಕ್‌ ಮತ್ತು ಪಾಸ್ಪರಸ್‌ ಹೈಡ್ರೇಡ್‌ ಎಂಬ ವಿಷಕಾರಿ ಅಂಶ ಹೊಂದಿದೆ. ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಮಾಗಿಸಿದ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್‌ ಕಾಯಿಲೆ ಬರುತ್ತದೆ. ಅಲ್ಲದೇ, ವಾಂತಿ, ಅತಿಸಾರ, ಎದೆಯುರಿ, ಗಂಟಲ ಕೆರೆತ, ಕೆಮ್ಮು, ಉಸಿರಾಟ ತೊಂದರೆ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕಾನೂನು ಏನು: ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ–2006, ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಂತ್ರಣ ಕಾಯ್ದೆ 2011ರ ಅನ್ವಯ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕವನ್ನು ಮಾವಿನ ಕಾಯಿ ಮಾಗಿಸುವುದಕ್ಕೆ ಬಳಸುವಂತಿಲ್ಲ. ಅಲ್ಲದೇ, ಈ ರಾಸಾಯನಿಕವನ್ನು ಮಾರಾಟ ಮಾಡುವಂತಿಲ್ಲ.

ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ–2006ರ ಸೆಕ್ಷನ್‌ 50ರ ಪ್ರಕಾರ ನೈಸರ್ಗಿಕವಾಗಿ ಮಾಗದ ಹಣ್ಣನ್ನು ಮಾರಾಟ ಮಾಡಿದರೆ ದಂಡ ವಿಧಿಸಬಹುದು. ಜತೆಗೆ ಯಾವುದೇ ವ್ಯಕ್ತಿ ಅಸುರಕ್ಷಿತ ಆಹಾರವನ್ನು ಮಾರುವುದು, ಆಮದು ಮಾಡಿಕೊಳ್ಳುವುದು, ದಾಸ್ತಾನು ಮಾಡುವುದು ಅಥವಾ ವಿತರಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಆದರೂ ವ್ಯಾಪಾರಿಗಳು ಈ ಕಾಯ್ದೆ ಉಲ್ಲಂಘಿಸಿ ಮತ್ತು ಅಧಿಕಾರಿಗಳ ಕಣ್ತಪ್ಪಿಸಿ ಕ್ಯಾಲ್ಸಿಯಂ ಕಾರ್ಬೈಡ್‌ ಅನಿಲದಿಂದ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸುವ ದಂಧೆ ನಡೆಸುತ್ತಿದ್ದಾರೆ.

*
‘ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 3.92 ಲಕ್ಷ ಟನ್‌ ಮಾವು ಫಸಲು ಬಂದಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಫಸಲು ಶೇ 20ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’.
–ಎಂ.ಎಸ್‌.ರಾಜು, ತೋಟಗಾರಿಕಾ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT