ಕುಂದಾಪುರ: ‘ಮರಳುಗಾರಿಕೆ ಕುರಿತು ಪಿಟ್ ಎಷ್ಟು, ಬ್ಲಾಕ್ ಎಷ್ಟು ಎನ್ನುವ ಮಾಹಿತಿಯನ್ನು ಗಣಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಇರುತ್ತದೆ. ಪೊಲೀಸ್ ಇಲಾಖೆಗೆ ಇದರ ಮಾಹಿತಿ ನೀಡುವ ಜವಾಬ್ದಾರಿ ಅವ ರದ್ದು. ಎಲ್ಲದಕ್ಕೂ ಪೊಲೀಸ್ ಇಲಾಖೆ ಯ ಮೇಲೆ ಜವಾಬ್ದಾರಿ ಹೊರೆಸುವುದು ಸರಿಯಲ್ಲ’ ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದರು.
ಕಂಡ್ಲೂರು ಹಾಗೂ ಹಳ್ಲಾಡು ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ್ದ ಅವರು ಕುಂದಾಪುರದ ಡಿವೈಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ಅಕ್ರಮದ ಕುರಿತು ಮಾಹಿತಿ ನೀಡಿದ 24 ಗಂಟೆಗಳ ಒಳಗೆ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಸರ್ಕಾರ ಮರಳುಗಾರಿಕೆಗೆ ಅನುಮತಿ ನೀಡಿದೆ ಅಥವಾ ಇಲ್ಲ ಎನ್ನುವುದನ್ನು ಸಂಬಂಧ ಪಟ್ಟ ಇಲಾಖೆಯು ನಮಗೆ ತಿಳಿಸುತ್ತದೆ. ಪರವಾನಗಿ ಅವಧಿ ಮುಗಿದು, ಪುನರ್ ಪರವಾನಗಿ ಪಡೆದುಕೊಳ್ಳುವವರೆಗೂ ಗಣಿಗಾರಿಕೆ ಮಾಡಕೂಡದು. ಆದರೆ, ಮಾಲೀಕರು ಸೂಚನೆ ನೀಡಿದಾಗ ಕಾರ್ಮಿಕರು ಮರಳುಗಾರಿಕೆ ಮುಂದುವರೆಸುತ್ತಾರೆ.
ಸರ್ಕಾರದ ಇಲಾಖೆಗಳ ನಡುವೆ ಹೊಂದಾಣಿಕೆ ಇದ್ದಾಗ ಕಾನೂನು ಸುವ್ಯಸ್ಥೆಯ ಪಾಲನೆ ಸುಲಭವಾಗುತ್ತದೆ. ಕಂದಾಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಮರಳು ಮಾತ್ರ ಲೋಕೋಪಯೋಗಿ ಇಲಾಖೆಯ ಯಾರ್ಡ್ಗೆ ಬರುತ್ತದೆ, ಉಳಿದ ಮರಳುಗಳು ಯಾರ್ಡ್ಗೆ ಬಾರದೆ ನೇರ ಮಾರಾಟವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಲ್ಲಾಧಿಕಾರಿ ನೇತೃತ್ವದ ಆಧಿಕಾರಿಗಳ ತಂಡ ಈ ಕುರಿತು ನಿರ್ಧರಿಸುತ್ತದೆ. ಜಿಲ್ಲಾಧಿಕಾರಿ ಈ ಕುರಿತು ಲಿಖಿತ ಆದೇಶ ನೀಡಿದಲ್ಲಿ ಪೊಲೀಸ್ ಇಲಾಖೆ ಈ ಸಂಬಂಧ ಕಾರ್ಯಾಚರಿಸುತ್ತದೆ ಎಂದರು.
ಕಂಡ್ಲೂರು ಪ್ರಕರಣದಲ್ಲಿ ನಿರಪರಾ ಧಿಗಳ ಬಂಧನವಾಗುತ್ತಿದೆ, ದಂಧೆಯ ಕಿಂಗ್ಪಿನ್ಗಳ ಬಂಧಿಸಿಲ್ಲ ಎನ್ನುವ ಆರೋಪದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮಾಯಕರನ್ನು ಅಥವಾ ನಿರಪರಾಧಿಗಳನ್ನು ಬಂಧಿಸುವುದರಿಂದ ಇಲಾಖೆಗೆ ಕಿರೀಟ ಬರುವುದಿಲ್ಲ, ನಿರಪರಾಧಿಗಳು ಯಾರು ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಕಿಂಗ್ಪಿನ್, ಹೇರ್ಪಿನ್ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.
‘ಮಂಗಳೂರಿನಿಂದ ಕಾರವಾರದವ ರೆಗೆ ರಾಷ್ಟ್ರೀಯ ಹೆದ್ದಾರೆ 66ರಲ್ಲಿ ಆಗುತ್ತಿರುವ ಅಪಘಾತಗಳಿಂದ ದಿನಕ್ಕೆ 3- 5 ರಷ್ಟು ಪ್ರಾಣಹಾನಿ ಸಂಭವಿಸುತ್ತಿರು ವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ, ತಜ್ಞರಿಂದ ಅಧ್ಯಯನ ವರದಿಯನ್ನು ನಿರೀಕ್ಷಿಸಿದೆ. ಈ ವರದಿ ಆಧರಿಸಿ ಹೆದ್ದಾರಿ ಪ್ರಯಾಣಿಕರ ಸುರ ಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪತ್ತೆಯಾಗದೆ ಉಳಿದಿರುವ ಅಪರಾಧ ಪ್ರಕರಣಗಳ ಕುರಿತು ವಿಶೇಷ ಮುತು ವರ್ಜಿ ವಹಿಸಲಾಗುತ್ತದೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯ ವಸ್ಥೆಯ ಪರಿಪಾಲನೆಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಹೇಳಿದರು. ಎಸ್ಪಿ ಬಾಲಕೃಷ್ಣ, ಹೆಚ್ಚುವರಿ ಎಸ್.ಪಿ ವಿಷ್ಣುವರ್ಧನ್, ಡಿವೈಎಸ್ಪಿ ಪ್ರವೀಣ್ ನಾಯಕ್, ಸಿಪಿಐ ಮಂಜಪ್ಪ ಇದ್ದರು.
ಬಿಡುಗಡೆಗೆ ಆಗ್ರಹ
ಕಂಡ್ಲೂರಿಗೆ ಬಂದಿದ್ದ ಐಜಿಪಿ ಹರಿಶೇಖರನ್ ಅವರನ್ನು ಭೇಟಿ ಮಾಡಿದ ಸ್ಥಳೀಯ ಮಹಿಳೆಯರು ಪ್ರಕರಣದಲ್ಲಿ ಬಂಧಿಸಲಾಗಿರುವ ನಿರಪರಾಧಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.