ಮಂಡ್ಯ: ನಾಡಿನ ಜಾತ್ಯತೀತ ಚೈತನ್ಯ ದಿವಂಗತ ಪ್ರೊ. ಎಚ್.ಎಲ್. ಕೇಶವ ಮೂರ್ತಿ ಅವರಿಗೆ ‘ನಮ್ಮ ನುಡಿ ನಮನ’ ಕಾರ್ಯಕ್ರಮವನ್ನು ಏ.16 ಬೆಳಿಗ್ಗೆ 11 ಗಂಟೆಗೆ ನಗರದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ ಹುಲ್ಕೆರೆ ಮಹದೇವು ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ–ರೈತ–ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ರಂಗ ನಿರ್ದೇಶಕ ಎಚ್. ಜನಾರ್ದನ್(ಜನ್ನಿ) ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಸಾಹಿತಿ ದೇವನೂರ ಮಹಾದೇವ, ಕ.ರಾ.ದ.ಸಂ.ಸ. ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರೊ.ಎಚ್ಎಲ್ಕೆ ಅವರ ಬದುಕು– ಬರಹ ಸಮನ್ವಯ ದೃಷ್ಟಿ ಕುರಿತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ವೈಚಾರಿಕ ಆಂದಲೋನಗಳಲ್ಲಿ ಎಚ್ಎಲ್ಕೆ ಅವರ ಸಕ್ರಿಯ ಪಾತ್ರ ಕುರಿತು ಸಾಹಿತಿ ಕಾಳೇಗೌಡ ನಾಗವಾರ, ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬಗ್ಗೆ ಅಂಕಣಕಾರ ಬಿ. ಚಂದ್ರೇಗೌಡ. ಸಂಘಟನೆ ಮತ್ತು ಹೋರಾಟ ಕುರಿತು ಸಾಹಿತಿ ಜಗದೀಶ್ ಕೊಪ್ಪ, ಕ.ರಾ.ದ.ಸಂ.ಸ. ಎಂ.ಬಿ. ಶ್ರೀನಿವಾಸ್, ಪತ್ರಕರ್ತ ಹಾರೋಹಳ್ಳಿ ಪ್ರಕಾಶ್ ಮಾತನಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿರುವ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರನ್ನು ಸನ್ಮಾನಿಸಲಾಗುವುದು ಎಂದರು. ಸಿ.ಕುಮಾರಿ, ಎಂ.ಬಿ.ಶ್ರೀನಿವಾಸ್, ಕೃಷ್ಣಪ್ಪ, ಸಿ.ಬಿ.ಮಹದೇವಪ್ಪ ಇದ್ದರು.