ಮೈಸೂರು: ವಿವಾದಕ್ಕೆ ಈಡಾಗಿರುವ ಆರ್.ಟಿ.ನಗರ ಬಡಾವಣೆ ಕುರಿತ ಭೂಮಾಲೀಕರು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಧ್ಯದ ರಾಜೀಸೂತ್ರಕ್ಕೆ ಹೈಕೋರ್ಟ್ನ ವಿಭಾಗೀಯ ಪೀಠ ಗುರುವಾರ ಒಪ್ಪಿಗೆ ಸೂಚಿಸಿತು. ಇದರಿಂದ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥವಾಗುವುದಕ್ಕೆ ಹಾದಿ ಸುಗಮಗೊಂಡಂತಾಗಿದೆ.
ರಾಜೀಸೂತ್ರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ಏ. 24ರ ಒಳಗೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಗೆ ಪೀಠ ಸೂಚನೆ ನೀಡಿದೆ.
ಏನಿದು ಪ್ರಕರಣ?: ಪಚ್ಚೇಗೌಡ ಎಂಬು ವವರಿಗೆ ಸೇರಿದ ಕೇರ್ಗಳ್ಳಿಯ ಸರ್ವೆ ನಂಬರ್ 115ರ ಮೂರು ಎಕರೆ ಪ್ರದೇಶ ವನ್ನು ಭೂಸ್ವಾಧೀನ ಮಾಡಿಕೊಳ್ಳದೇ ಏಕಪಕ್ಷೀಯವಾಗಿ ‘ಮುಡಾ’ ಆರ್.ಟಿ. ನಗರ ಬಡಾವಣೆ ನಿರ್ಮಾಣಕ್ಕಾಗಿ ತನ್ನ ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿ ಸಿತು. ಇದಕ್ಕೆ ಪ್ರತಿಯಾಗಿ ಯಾವುದೇ ಪರಿಹಾರವನ್ನು ಭೂಮಾಲೀಕರಿಗೆ ‘ಮುಡಾ’ ನೀಡಲಿಲ್ಲ. ಈ ಕ್ರಮವನ್ನು ಪಚ್ಚೇಗೌಡ ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
2012ರಿಂದ ಇಲ್ಲಿವರೆಗೆ ಪ್ರಕರಣ ವಿಚಾರಣೆಯ ಹಂತದಲ್ಲೇ ಇದೆ. ವಿವಾದಿತ ಭೂಮಿ ಬಡಾವಣೆ ಮಧ್ಯ ಇರುವುದರಿಂದ ಹಾಗೂ ಹೈಕೋರ್ಟ್ ನಿವೇಶನ ಹಂಚಿಕೆಗೆ ತಡೆಯಾಜ್ಞೆ ನೀಡಿದ್ದರಿಂದ ಸುಮಾರು 2,500 ನಿವೇಶನ ಹಂಚಿಕೆ ನಡೆದಿರಲಿಲ್ಲ.
ಅಭಿವೃದ್ಧಿಪಡಿಸಿದ ವಿವಾದಿತ ಪ್ರದೇ ಶವನ್ನು ಶೇ 50:50ರ ಅನುಪಾತದಲ್ಲಿ ಪರಸ್ಪರ ಹಂಚಿಕೆ ಮಾಡಿಕೊಳ್ಳುವ ರಾಜೀಸೂತ್ರಕ್ಕೆ ಪಚ್ಚೇಗೌಡ ಹಾಗೂ ‘ಮುಡಾ’ದವರು ಪರಸ್ಪರ ಸಮ್ಮತಿಸಿದ್ದಾರೆ. ಸದ್ಯ, ರಜೆಯಲ್ಲಿರುವ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್ ರಜೆ ಮುಗಿಸಿ ಬಂದ ನಂತರ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.