ಚಾಮರಾಜನಗರ: ‘ಕ್ಷೇತ್ರದ ಮತದಾರರು ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಈ ಸೋಲಿನಿಂದ ನಾನು ಎದೆಗುಂದುವುದಿಲ್ಲ. ನನಗೆ ಮತ ನೀಡಿರುವ ಜನರ ಹಿತಕಾಯಲು ಬದ್ಧ. ಅವರ ಸಮಸ್ಯೆ ಬಗೆಹರಿಸಲು ಹೋರಾಟ ಮುಂದುವರಿಸುತ್ತೇನೆ’ ಎಂದು ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್ಕುಮಾರ್ ಪ್ರತಿಕ್ರಿಯಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್ನಿಂದ ಹಣದ ಹೊಳೆ ಹರಿದಿದೆ. ಆಡಳಿತ ಯಂತ್ರದ ದುರುಪಯೋಗವಾಗಿದೆ. ಆದರೆ, ಮತದಾರರು ನೀಡಿರುವ ತೀರ್ಪನ್ನು ನಾನು ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದರು.
‘ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಇತ್ತು. ಆದರೆ, ಈ ಸೋಲು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದರು.
‘ನಾನು ಸೋತ ತಕ್ಷಣ ಮನೆಯಲ್ಲಿ ಕೂರುವುದಿಲ್ಲ. ಕ್ಷೇತ್ರದಲ್ಲಿ ಸಕ್ರಿಯನಾಗಿರುತ್ತೇನೆ. ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರಿಹರಿಸುತ್ತೇನೆ’ ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಬಿ. ಶ್ರೀರಾಮುಲು ಸೇರಿದಂತೆ ಹಲವು ಮುಖಂಡರು ದೂರವಾಣಿ ಕರೆ ಮಾಡಿ ಸಮಾಧಾನ ಹೇಳಿದ್ದಾರೆ. ಅವರೆಲ್ಲರೂ ಸಾಕಷ್ಟು ಶ್ರಮವಹಿಸಿದ್ದರು. ಈ ಶ್ರಮ ವ್ಯರ್ಥವಾಗಿರುವ ಬಗ್ಗೆ ನನಗೆ ದುಃಖವಿದೆ ಎಂದು ತಿಳಿಸಿದರು.