ಮಾಗಡಿ: ‘ಪೌರಾಣಿಕ ನಾಟಕಗಳು ನಮ್ಮ ಬದುಕಿಗೆ ಪೂರಕವಾದ ಸತ್ಯ, ನ್ಯಾಯ ನೀತಿ, ಧರ್ಮದ ಸಂದೇಶವನ್ನು ಬೋಧಿಸುತ್ತವೆ. ಅವು ನೆಮ್ಮದಿಯ ಬದುಕಿಗೆ ದಾರಿದೀಪಗಳಿದ್ದಂತೆ ಎಂದು ಹಿರಿಯ ಕಲಾವಿದ ಬಸವರಾಜು ತಿಳಿಸಿದರು.
ತಿರುಮಲೆ ತಿರುವೆಂಗಳನಾಥ ಜಾತ್ರೆಯ ಅಂಗವಾಗಿ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ರಾತ್ರಿ ರಾಜ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರಂಗಭೂಮಿ ಕಲಾವಿದರಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಿ, ನೀತಿಯ ಪಾಠವನ್ನು ಸಾರುತ್ತಿರುವ ರಂಗಕಲೆ ಉಳಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಪುರಸಭೆಯ ಸದಸ್ಯರಾದ ರಘು, ಮಹೇಶ್, ರಿಯಾಜ್, ತಿರುಮಲೆ ಬಸವರಾಜು, ನರಸಿಂಹಯ್ಯ,ಪುರಸಭೆ ಮಾಜಿ ಅಧ್ಯಕ್ಷೆ ರುಕ್ಮಿಣಿ ರಂಗನಾಥ್, ಕೋಟೆ ಮಾರಮ್ಮದೇವಾಲಯ ಟ್ರಸ್ಟಿನ ಅಧ್ಯಕ್ಷ ಟಿ.ಸಿ.ನಾಗರಾಜು,ರಂಗಕಲಾವಿದೆ ಪದ್ಮಗಿರೀಶ್, ರಂಗನಿರ್ದೇಶಕ ಬೆಳಗುಂಬ ಮುನಿಯಪ್ಪ, ಕ್ಯಾಶಿಯೋ ವೆಂಕಟೇಶ್ ಇತರರು ಮಾತನಾಡಿದರು. ಹಾರ್ಮೋನಿಯಂ ಮಾಸ್ಟರ್ ಎಚ್.ಎಂ.ಶ್ರೀನಿವಾಸ್ ಇತರರನ್ನು ಸನ್ಮಾನಿಸಲಾಯಿತು.