ಶಕ್ತಿನಗರ: ದೇವಸೂಗೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಅಧ್ಯಕ್ಷೆ ಸುಲೋಚನಾ ಸೂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂತೆ ಹರಾಜು ಸಭೆಯಲ್ಲಿ ಸುರೇಶ ತುಂಗಭದ್ರಾ ಅವರು ₹1.94 ಲಕ್ಷಕ್ಕೆ ಗುತ್ತಿಗೆ ಪಡೆದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ಮಾತನಾಡಿ, ಸಂತೆ ಮುಗಿದ ಮರುದಿನವೇ ಮಾರುಕಟ್ಟೆ ಸ್ವಚ್ಛಗೊಳಿಸಬೇಕು. ಅಸ್ವಚ್ಛತೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಹರಾಜಿನ ಪ್ರಕ್ರಿಯೆ ಮುಗಿದ ತಕ್ಷಣ ವ್ಯಾಪರಸ್ಥರಲ್ಲಿ ಒಂದು ತಕ್ಕಡಿಗೆ ₹30 ಮೀರದಂತೆ ವಸೂಲಿ ಮಾಡಬಾರದು ಎಂದರು.
ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮಾರುಕಟ್ಟೆ ಸಭಾಂಗಣದಲ್ಲಿ ಸಂತೆ ನಡೆಯಬೇಕು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡದಂತೆ ತಡೆಯಲು ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾಣಿಕೆಮ್ಮ ಚಂದಪ್ಪ, ಸದಸ್ಯರಾದ ಸಾಂಬಶಿವ, ಆಂಜಿನಮ್ಮ ಘಂಟೆ, ಮುಖಂಡರಾದ ಪ್ರವೀಣಗೌಡ, ಹಂಪನಗೌಡ, ತಾಯಪ್ಪ ಬೂತಪಲ್ಲಿ, ವೆಂಕಟೇಶ ದೇವಸೂಗೂರು, ಬಿಲ್ಕಲೆಕ್ಟರ್ ಸುರೇಶ ಮಾನ್ವಿ, ಅಶೋಕಧಣಿ ಇದ್ದರು.