ಹಾವೇರಿ: ‘ನನ್ನ ಪ್ರೀತಿಯ ನಾಗರಿಕ ಬಂಧುಗಳೇ, ಅಣ್ಣ–ತಮ್ಮಂದಿರೇ, ಅಕ್ಕ–ತಂಗಿಯರೇ, ತಂದೆ–ತಾಯಿಯರೇ, ಉಜ್ವಲ ಭಾರತದ ನಿರ್ಮಾಪಕರೇ... ಹನಿ ನೀರು ಸಹ ಅಮೃತದಂತೆ. ನಾವು ನದಿಯಲ್ಲಿ ನೀರಿನ ಸಂಗ್ರಹಣೆಗೆ ಕಷ್ಟ ಪಡುವ ಚಿತ್ರಣವನ್ನು ನೀವು ವಿಡಿಯೊದಲ್ಲಿ ನೋಡಬಹುದು. ನೀವು, ನಿಮ್ಮ ವಾರ್ಡಿನಲ್ಲಿ ಮತ್ತು ಮನೇಲಿ ನೀರು ದುರುಪಯೋಗವಾಗದಂತೆ ಸಾಧ್ಯವಾದ ಮಟ್ಟಿಗೆ ತಡೆಯಬೇಕು ಎಂದು ಈ ಮೂಲಕ ನಿಮ್ಮೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ’ –ನಿಮ್ಮವ ಶಂಕರ್
ಇದು ವಾಟ್ಸ್ಆ್ಯಪ್ನಲ್ಲಿರುವ ನಗರಸಭೆ ಆಯುಕ್ತ ಶಂಕರ ಜಿ.ಎಸ್ ಅವರ ಮನವಿ.
ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸಲು ಅವರು ಕೂಲಿ ಕೆಲಸ ಮಾಡಿ, ಅದರ ವಿಡಿಯೊವನ್ನು ವಾಟ್ಸ್ಆ್ಯಪ್ನಲ್ಲಿ ಹಾಕಿದ್ದಾರೆ. ಕೆಂಚಾರಗಟ್ಟಿಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿದ್ದ ಮರಳಿನ ತಡೆಗೋಡೆಯ ಮೇಲ್ಭಾಗ ಒಡೆದಿದೆ. ಈ ತಡೆಗೋಡೆಯ ಮರು ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಜೊತೆ ಕೂಲಿ ಮಾಡುವ ಮೂಲಕ ಜಾಗೃತಿ ಮೂಡಿಸಲು ಅವರು ಯತ್ನಿಸಿದ್ದಾರೆ.
ಬರ, ಅಂತರ್ಜಲ ಕುಸಿತದ ಪರಿಣಾಮ ನಗರದಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಆದರೆ, ನಗರದಲ್ಲಿ ಹಲವೆಡೆ ನೀರು ಪೋಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಹಿನ್ನೆಲೆ: ತುಂಗಭದ್ರಾ ನದಿಗೆ ತಾಲ್ಲೂಕಿನ ಕೆಂಚಾರಗಟ್ಟಿ ಬಳಿ ನಿರ್ಮಿಸಲಾದ ಜಾಕ್ವೆಲ್ನಿಂದ ಹಾವೇರಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಇಲ್ಲಿ ನದಿಗೆ ಮರಳಿನ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಮಳೆ ಕೊರತೆಯಿಂದಾಗಿ ಡಿಸೆಂಬರ್ನಲ್ಲೇ ನದಿಯಲ್ಲಿ ನೀರು ಬತ್ತಿ ಹೋಗಿದೆ.