ನಂಜನಗೂಡು ಉಪಚುನಾವಣೆಯಲ್ಲಿ ತಮ್ಮ ‘ಸ್ವಾಭಿಮಾನ’ವನ್ನು ಪಣಕ್ಕಿಟ್ಟು ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್ ಹೇಳಿದ್ದರು. ಈಗ ಸೋತಿರುವುದರಿಂದ ಅವರ ‘ಸ್ವಾಭಿಮಾನ’ ಕಳೆದುಹೋಯಿತೇ ಅಥವಾ ಅದಕ್ಕೆ ತುಕ್ಕು ಹಿಡಿಯಿತೇ? ಚುನಾವಣೆ ಅವರ ‘ಸ್ವಾಭಿಮಾನ’ವನ್ನು ಅಳೆಯುವ ಮಾನದಂಡವೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯುವುದು, ರಾಜಕೀಯ ಅಧಿಕಾರ ಬರುವುದು, ಹೋಗುವುದು ಸಹಜ. ಈ ಆಗುಹೋಗುಗಳನ್ನು ಗಮನದಲ್ಲಿ ಇಟ್ಟುಕೊಂಡು ಸೇವಾ ಮನೋಭಾವ ಬೆಳೆಸಿಕೊಂಡರೆ ಜನರ ಆಶೀರ್ವಾದ, ಮೆಚ್ಚುಗೆ, ಮತಗಳನ್ನು ಪಡೆದು ಸೇವೆ ಮಾಡುವ ಅವಕಾಶ ಸಿಗುತ್ತದೆ. ಪ್ರಸಾದ್ ಅಧಿಕಾರವನ್ನು ಅವ್ಯಾಹತವಾಗಿ ಅನುಭವಿಸಿರುವವರು. ಆದರೆ ಅವರು ಸಚಿವ ಸ್ಥಾನ ಕಳೆದುಕೊಂಡ ತಕ್ಷಣ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿತೆಂದು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಸೇರಿ ಉಪ ಚುನಾವಣೆಗೆ ಕಾರಣರಾಗಿದ್ದು ದುರಂತ.
ಇವರನ್ನೆಲ್ಲ ಸಾಮಾನ್ಯ ಜನರಿಗೆ ಹೋಲಿಸಿದರೆ, ಅವರು ತಮ್ಮ ಸ್ವಾಭಿಮಾನವನ್ನು ಉಳಿಸಿಕೊಂಡು, ಎಲ್ಲವನ್ನೂ ತಾಳ್ಮೆಯಿಂದ ತಾಳೆ ಹಾಕಿ ನೋಡಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದು ಪ್ರಜಾತಂತ್ರದ ಒಂದು ರಂಜನಾತ್ಮಕ ಗುಣವಿಶೇಷ.
ಕೆ.ಎನ್.ಭಗವಾನ್,