ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುಮೆ ಮಾಡಿ ಎಡಮ್ಯಾರ್ ಆಚರಣೆ

Last Updated 15 ಏಪ್ರಿಲ್ 2017, 4:54 IST
ಅಕ್ಷರ ಗಾತ್ರ

ಕುಶಾಲನಗರ: ಕೊಡವ ಪಂಚಾಂಗದ ಹೊಸವರ್ಷ ಎಡಮ್ಯಾರ್ ಅಂಗವಾಗಿ ಸಿ.ಎನ್.ಸಿ. ಸಂಘಟನೆಯ ಆಶ್ರಯದಲ್ಲಿ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಶುಕ್ರವಾರ ಜೋಡಿ ಎತ್ತುಗಳ ಮೂಲಕ ಗದ್ದೆಯಲ್ಲಿ ಉಳುಮೆ ಮಾಡುವುದರೊಂದಿಗೆ ಕೃಷಿಚಟುವಟಿಕೆಗೆ ಚಾಲನೆ ನೀಡಲಾಯಿತು.

ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಗದ್ದೆಯಲ್ಲಿ ಶುಕ್ರವಾರ ಬೆಳಿಗ್ಗೆ ಸಿ.ಎನ್.ಸಿ. ಮುಖ್ಯಸ್ಥ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಕೊಡವರ ಸಂಪ್ರಾದಾ ಯಿಕ ಉಡುಗೆ ತೊಡುಗೆ ಧರಿಸಿ  ಉಳುಮೆ ಮಾಡುವುದರೊಂದಿಗೆ ಸಾಂಪ್ರದಾಯಿಕವಾಗಿ ನೂತನ ವರ್ಷವನ್ನು ಬರಮಾಡಿಕೊಂಡರು.

ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸವರ್ಷ ಆಚರಿಸಲಾಗುತ್ತದೆ. ಜಿಲ್ಲೆಯ ಜನತೆಗೆ ಕೃಷಿ ಪ್ರಧಾನ ಜೀವಾಳವಾಗಿರುವುದರಿಂದ ಈ ದಿನ ಹೊನ್ನಾರು ಆಚರಿಸುವ ಮೂಲಕ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ ಎಂದು ನಾಚಪ್ಪ ಹೇಳಿದರು.

ಕೊಡವರ ಸಂಸ್ಕೃತಿ, ಭಾಷೆ, ಸಮುದಾಯದ ರಕ್ಷಣೆ ಹಾಗೂ ಎಲ್ಲ ಮೂಲ  ಹಕ್ಕುಗಳನ್ನು ಸಂವಿಧಾನ ಬದ್ಧಗೊಳಿಸಲು ಸರ್ಕಾರ 'ಕೊಡವ ಲ್ಯಾಂಡ್' ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಬೇಕು  ಎಂದು ಆಗ್ರಹಿಸಿದರು.

ಇಂದಿನ ಪೀಳಿಗೆಗೆ ಅಮೂಲ್ಯ ಸಂಸ್ಕೃತಿಯನ್ನು ಬಳುವಳಿಯಾಗಿ ನೀಡುವುದು ಮತ್ತು ಮಾನವರ ನಡುವಿನ ಬಾಂಧವ್ಯಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕೊಡವರು ಸಾಮೂಹಿಕವಾಗಿ ಹಬ್ಬಹರಿದಿನಗಳನ್ನು ಆಚರಣೆ ಮಾಡುವುದು ಅಗತ್ಯವಾಗಿದೆ ಎಂದರು.

ಉಳುಮೆಗೆ ಮುನ್ನಾ ಮನೆಯ ನೆಲ್ಲಕ್ಕಿ ಬಾಡೆಯಲ್ಲಿ ಪೂಜೆ ಸಲ್ಲಿಸಿ ನಂತರ ಗದ್ದೆಯಲ್ಲಿ  ಹೊಲ ಹಾಗೂ ಎತ್ತುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಸಿ.ಎನ್.ಸಿ. ಸಂಘಟನೆಯ ಪ್ರಮುಖರಾದ ನಂದಿನೆರವಂಡ ಉತ್ತಪ್ಪ, ನಂದಿನೆರವಂಡ ವಿಜು, ಪುಲೇರ ಕಾಳಪ್ಪ ಮತ್ತು ಕುಟುಂಬಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT