ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಕುರುವದಿನ್ನಪಲ್ಲಿ ಗ್ರಾಮಸ್ಥರು ಹಾಜರಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನ್ನಾಖಾನ್ ಮತ್ತು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ವೆಂಕಟರವಣಪ್ಪ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ‘ನಮ್ಮ ಗ್ರಾಮದಲ್ಲಿ 1 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು, ತಾತ್ಕಾಲಿಕವಾಗಿ ಗ್ರಾಮದ ಕೃಷ್ಣಪ್ಪ ಎಂಬುವರ ಖಾಸಗಿ ಕೊಳವೆ ಬಾವಿಯಿಂದ ನೀರು ಸಂಗ್ರಹಣೆ ಮಾಡುತ್ತಿದ್ದವು. ಆದರೆ ಈಗ ಅವರು ನೀರು ಬಿಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದಾರೆಂದು ತಿಳಿಸಿದರು.
ಸಭೆಯ ನಂತರ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕುರುವುದಿನ್ನಪಲ್ಲಿಗೆ ತೆರಳಿ ಕೃಷ್ಣಪ್ಪ ಅವರ ಮನವೊಲಿಸಿದರು. ಜನರಿಗೆ ಮೊದಲಿನಂತೆ ನೀರು ಕೊಡಲು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಸಾಯಿನಾಥರೆಡ್ಡಿ, ವಿಮಲಮ್ಮ, ಲತಾ ರಂಗಾರೆಡ್ಡಿ, ಗಂಗುಲಮ್ಮ, ಆನಂದಪ್ಪ, ರವಣಪ್ಪ, ಲಕ್ಷ್ಮಿನರಸಿಂಹಪ್ಪ, ಆದಿನಾರಾಯಣ, ಪಾರ್ವತಮ್ಮ, ನಾರಾಯಣಮ್ಮ ಹಾಗೂ ಸಿಬ್ಬಂದಿ ಶ್ರೀನಿವಾಸ, ಚಂದ್ರ ಇದ್ದರು.