ಹೊಳೆನರಸೀಪುರ: ತಾಲ್ಲೂಕಿನಲ್ಲಿ ಹೋಮಾವತಿ ನದಿ, ಶ್ರೀರಾಮದೇವರ ಕಟ್ಟೆಯ ಎಡ ಮತ್ತು ಬಲದಂಡೆ ನಾಲೆ ಹಾಗೂ 10ಕ್ಕೂ ಹೆಚ್ಚು ದೊಡ್ಡ ಕೆರೆಗಳು ಇದ್ದರೂ ಬರ ಆವರಿಸಿದೆ. ಮಳೆ ಇಲ್ಲದೆ ನೂರಾರು ಎಕರೆ ಪ್ರದೇಶ ಬೀಳು ಬಿಡಲಾಗಿದೆ. ಭತ್ತ, ಕಬ್ಬು, ಆಲೂಗೆಡ್ಡೆ, ಶುಂಠಿ, ಹೊಗೆಸೊಪ್ಪು, ಜೋಳ, ರಾಗಿ ಪ್ರಮುಖ ಬೆಳೆಗಳು. ತೆಂಗು ಮತ್ತು ಅಡಿಕೆಯನ್ನೂ ಬೆಳೆಯಲಾಗಿದೆ. ಆದರೆ ಮಳೆ ಇಲ್ಲದೆ ಯಾವ ಬೆಳೆಗಳೂ ರೈತರ ಕೈಹಿಡಿಯಲಿಲ್ಲ.
ಕಸಬಾ ಹೋಬಳಿಯಲ್ಲಿ 5,980 ಎಕರೆ ಬೆಳೆ ನಾಶವಾಗಿದ್ದರೆ, ಹಳೇಕೋಟೆ ಹೋಬಳಿಯಲ್ಲಿ 4,110 ಎಕರೆ, ಹಳ್ಳಿ ಮೈಸೂರು ಹೋಬಳಿಯಲ್ಲಿ 5,325 ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.ತಾಲ್ಲೂಕಿನಲ್ಲಿ 15,415 ಎಕರೆ ಬೆಳೆ ನಾಶವಾಗಿದ್ದು, 25,420 ರೈತರಿಗೆ ಪರಿಹಾರ ನೀಡಲು ₹ 9 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೃಷಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಅಡಿಕೆ ಮತ್ತು ತೆಂಗಿನ ಮರಗಳ ಸುಳಿ ಒಣಗುತ್ತಿದೆ. ಕೆರೆಗಳು ಬತ್ತಿ ಹೋಗಿವೆ. ಕೊಳವೆ ಬಾವಿಯಲ್ಲಿ ನೀರು ಇಂಗಿ ಹೋಗಿದೆ. ಹಾಗಾಗಿ ದನಕರುಗಳಿಗೆ ಮೇವು ಮತ್ತು ನೀರು ಇಲ್ಲದಂತಾಗಿದೆ. ಜಾನುವಾರುಗಳಿಗೆ ನೀರು, ಮೇವು ನೀಡಲು ಆಗದೆ ಕಡಿಮೆ ದರಕ್ಕೆ ಸಂತೆ ಯಲ್ಲಿ ರೈತರು ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹಳ್ಳಿಮೈಸೂರು ಹೋಬಳಿಯಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಗೋಶಾಲೆ ತೆರೆದು 2 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ ನೀಡಲಾಗಿದೆ. ಮೂರು ಕಡೆ ಮೇವು ಬ್ಯಾಂಕ್ ತೆರೆಯಲಾಗಿದೆ. ಜಾನುವಾರು ಗಳಿಗೆ ಸರಿಯಾಗಿ ಮೇವು ಸಿಗುತ್ತಿಲ್ಲ. ಹೊರ ಜಿಲ್ಲೆಗಳಿಂದ ಹುಲ್ಲನ್ನು ತರಿಸಿ ಗೋಶಾಲೆ ನಡೆಸಲಾಗುತ್ತಿದೆ.
ತಾಲ್ಲೂಕಿನ ಚೋಳೇನಹಳ್ಳಿ, ಮೆಣ ಗನಹಳ್ಳಿ, ದೊಡ್ಡಕಾಡನೂರು, ಆಲ ಗೌಡನಹಳ್ಳಿ, ಬಾಚನಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 15 ಹಳ್ಳಿಗಳಿಗೆ 6 ಟ್ಯಾಂಕರ್ನಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 59 ಹೊಸ ಕೊಳವೆಬಾವಿ ಕೊರೆಸಲಾಗಿದ್ದು, ಕೆಲವು ಕಡೆ ನೀರು ಬಂದಿಲ್ಲ. ನೀರು ಬಂದಿರುವ ಬೋರ್ವೆಲ್ಗಳಿಂದ ಕಿರು ನೀರು ಸರಬರಾಜು ಟ್ಯಾಂಕ್ಗಳಿಗೆ ನೀರು ತುಂಬಿಸಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೂ ಕೆಲವಡೆ ಮೇವು ಬ್ಯಾಂಕ್ ಮತ್ತು ಗೋಶಾಲೆ ತೆರೆಯಲು ಬೇಡಿಕೆ ಹೆಚ್ಚಿದೆ.
‘ಪ್ರಸಕ್ತ ವರ್ಷ 71 ಬೋರ್ವೆಲ್ ತೆಗೆಯಲು ಅನುಮತಿ ಸಿಕ್ಕಿದ್ದು. ಈಗಾ ಗಲೇ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ 59 ಬೋರ್ವೆಲ್ ಕೊರೆಸಲಾಗಿದೆ. ಹಳ್ಳಿಗಳಲ್ಲಿನ ಕಿರುನೀರು ಸರಬರಾಜು ಟ್ಯಾಂಕ್ಗಳಿಗೆ ಬೋರ್ವೆಲ್ನಿಂದ ನೀರು ತುಂಬಿಸಲು ಪೈಪ್ ಅಳವಡಿಸ ಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಸತೀಶ್ಬಾಬು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.