ಗದಗ: ಪಡಿತರ ಚೀಟಿಗಾಗಿ ಜಾತಿ, ಆದಾಯ ಪ್ರಮಾಣಪತ್ರ ಕಡ್ಡಾಯ ಮಾಡಿರುವುದನ್ನು ಕೈಬಿಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಆಹಾರ ಇಲಾಖೆಯ ಕಚೇರಿಗೆ ಮನವಿ ಸಲ್ಲಿಸಿದರು.
ಹಿಂದೆ ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿತ್ತು. ಪಡಿತರ ಚೀಟಿಗಳಿಗೆ ಕೂಪನ್ ವ್ಯವಸ್ಥೆ ಜಾರಿ ಗೊಳಿಸಲಾಯಿತು. ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ನೀಡುವುದನ್ನು ಬಂದ್ ಮಾಡಲಾಗಿದೆ. ಸದ್ಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದರಿಂದ ಜನರು ಪಡಿತರ ಧಾನ್ಯ ಪಡೆಯಲು ಪರದಾಡುತ್ತಿದ್ದಾರೆ. ಪಡಿತರ ಚೀಟಿಗೆ ಜಾತಿ, ಆದಾಯ ಪ್ರಮಾಣಪತ್ರ ಕಡ್ಡಾಯಗೊಳಿಸಿರುವುದನ್ನು ಕೈಬಿಡಬೇಕು. ಸರ್ಕಾರ ಈ ರೀತಿಯ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವುದ್ದರಿಂದ ಕೊಳಗೇರಿ ನಿವಾಸಿಗಳು, ಬಡಜನರು, ಮಧ್ಯಮ ವರ್ಗದ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ ಎಂದು ಆರೋಪಿಸಿದರು.
ಸ್ಲಂ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಅಬುಬಕರ್ ಮಕಾನದಾರ, ಮೆಹರುನಿಸಾ ಢಾಲಾಯತ, ಪರವೀನಬಾನು ಹವಾಲ್ದಾರ, ಸಾಕ್ರು ಬಾಯಿ ಗೋಸಾವಿ, ರಫೀಕ್ ಧಾರ ವಾಡ, ಮಕ್ತುಂ ಹವಾಲ್ದಾರ, ದಾದು ಗೋಸಾವಿ ಇದ್ದರು.