ಚಾಮರಾಜನಗರ: ಜಿಲ್ಲೆಯ ಸುವರ್ಣಾ ವತಿ ಹಾಗೂ ಚಿಕ್ಕಹೊಳೆ ಅವಳಿ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಶನಿವಾರ ನಗರದಲ್ಲಿ ರಾಜ್ಯ ಉಪ್ಪಾರ ಯುವ ವೇದಿಕೆ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಯಿತು.
ಸುವರ್ಣಾವತಿ ಜಲಾಶಯದಿಂದ ಪಾದಯಾತ್ರೆ ಆರಂಭಿಸಿದ ವೇದಿಕೆಯ ಕಾರ್ಯಕರ್ತರು ಹಾಗೂ ಮುಖಂಡರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಲಾಶಯಕ್ಕೆ ನೀರು ತುಂಬಿಸಬೇಕು ಎಂದು ಘೋಷಣೆ ಕೂಗಿದರು. ಬಳಿಕ, ಜಿಲ್ಲಾಧಿಕಾರಿ ಬಿ. ರಾಮು ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೆರೆ, ಕಟ್ಟೆಗಳು ಬರಿದಾಗಿದೆ. ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದ್ದು, ಎಲ್ಲೆಡೆ ನೀರಿನ ಹಾಹಾಕಾರ ಉಂಟಾಗಿದೆ ಎಂದು ದೂರಿದರು.
ಸುವರ್ಣಾವತಿ ಜಲಾಶಯಕ್ಕೆ ಹೊಂದಿಕೊಂಡಂತೆ 10,200 ಎಕರೆ ವ್ಯವಸಾಯ ಭೂಮಿ ಇದೆ. 30ಲಕ್ಷಕ್ಕೂ ಹೆಚ್ಚು ತೆಂಗಿನ ಬೆಳೆ ಬೆಳೆಯಲಾಗುತ್ತಿದೆ. ಆದರೆ, ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೂಲಿ ಮಾಡುವ ರೈತರು ಕುಡಿಯುವ ನೀರು ಹಾಗೂ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ ಕೂಡಲೇ, ಈ ಅವಳಿ ಜಲಾ ಶಯಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಕೆರೆಗಳಿಗೆ ನದಿ ಮೂಲ ದಿಂದ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಸುವ ರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೆ ನೀರು ತುಂಬಿಸಬೇಕು. ಇದರಿಂದ ಅಂತರ್ಜಲದ ಮಟ್ಟವೂ ಹೆಚ್ಚುತ್ತದೆ. ಬಡ ರೈತರಿಗೆ ಹೆಚ್ಚಿನ ಅನುಕೂಲವಾಗು ತ್ತದೆ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸ ಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಉಪ್ಪಾರ ವೇದಿ ಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವರದ ರಾಜು, ಮುಖಂಡರಾದ ಎನ್. ಶಿವ ಮಲ್ಲು, ಅಂಬರೀಶ್, ಸಿದ್ದಶೆಟ್ಟಿ, ಜಿ.ಎಂ. ಶಂಕರ್, ಎಚ್.ಜಿ. ಮಂಜುನಾಥ, ಮಹೇಶ್, ರಂಗಸ್ವಾಮಿ, ಕೃಷ್ಣ, ನಿಂಗ ರಾಜು, ಆಲ್ಲೂರು ಮಲ್ಲು, ಮಣಿಕಂಠ, ಮಹದೇವಪ್ರಸಾದ್ ಪಾಲ್ಗೊಂಡಿದ್ದರು.