ಹೊಸದುರ್ಗ: ತಾಲ್ಲೂಕಿನ ಬೋಕಿಕೆರೆ ಕರಿಯಮ್ಮದೇವಿ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನಡೆಯಿತು. ಶನಿವಾರ ಬೆಳಿಗ್ಗೆ ಬಣ್ಣಬಣ್ಣದ ವಸ್ತ್ರ, ಬಾವುಟ ಹಾಗೂ ಹೂ ಮಾಲೆಗಳಿಂದ ಸಿಂಗಾರಗೊಂಡಿದ್ದ ರಥಕ್ಕೆ ಅಲಂಕೃತ ಕರಿಯಮ್ಮದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಧೂಪದ ಸೇವೆ, ಕರ್ಪೂರ ಪೂಜೆ ಮಹಾಮಂಗಳಾರತಿ ಬಳಿಕ ಭಕ್ತರು ರಥವನ್ನು ಎಳೆದರು.
ವಿಶೇಷತೆ: ‘ಈ ಹಿಂದಿನಿಂದಲೂ ನಸುಕಿನ ವೇಳೆ ರಥೋತ್ಸವ ನೆರವೇರಿಸಲಾಗುತ್ತಿತ್ತು. ಹೀಗಾಗಿ ಸಮೀಪದ ಗ್ರಾಮಗಳ ಭಕ್ತರಿಗೆ ಬರಲು ಸಾಧ್ಯವಾಗು
ತ್ತಿರಲಿಲ್ಲ. ಈ ಬಾರಿ ಬೆಳಿಗ್ಗೆ9.30ರ ಸುಮಾರಿನಲ್ಲಿ ತೇರು ಎಳೆಯಲಾಯಿತು. ಸಂಜೆ ಆಂಜನೇಯಸ್ವಾಮಿ ಉತ್ಸವ ನಡೆಯಿತು’ ಎನ್ನುತ್ತಾರೆ ಉಪನ್ಯಾಸಕ ಬಿ.ಆರ್.ಕಲ್ಲೇಶ್.
ಗೂಳಿಹಟ್ಟಿ: ಇಲ್ಲಿನ ಕರಿಯಮ್ಮದೇವಿ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ನಡೆಯಿತು.ರಥೋತ್ಸವದ ಅಂಗವಾಗಿ ದೇಗುಲ
ದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಏ.14ರಂದು ಸಂಜೆ ಎನ್.ಜಿ.ಹಳ್ಳಿಯ ಮುತ್ತಿನ ಮುಡಿಯಮ್ಮದೇವಿ ಕೂಡುಭೇಟಿ ಹಾಗೂ ಅಕ್ಕ–ತಂಗಿಯರ ಹೂವಿನ ಉತ್ಸವ ನೆರವೇರಿತು. ಶನಿವಾರ ಬೆಳಿಗ್ಗೆ ರಥೋತ್ಸವ ನೆರವೇರಿಸಲಾಯಿತು.
‘ಏ.16ರಂದು ಕರಿಯಮ್ಮದೇವಿಯ ಹೂವಿನ ಉತ್ಸವ, ಬೆಲ್ಲದರಾಶಿ ಪರಿಷೆ, ಅಡ್ಡಪಲ್ಲಕ್ಕಿ ಉತ್ಸವ, 17ರಂದು ಅವಭೃತ ಸ್ನಾನ, ಮಹಾಮಂಗಳಾರತಿ, 18ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ’ ಎನ್ನುತ್ತಾರೆ ಬಿಜೆಪಿಯ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗೂಳಿಹಟ್ಟಿ ಜಗದೀಶ್.