ಅಫಜಲಪುರ: ತಾಲ್ಲೂಕಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗೆ ತುಂತುರು ನೀರಾವರಿ ಬಳಸಿಕೊಂಡಿ ರುವುದು ಜಿಲ್ಲೆಗೆ ಮಾದರಿಯಾಗಿದೆ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದರು.ತಾಲ್ಲೂಕಿನ ಬಂದರವಾಡದಲ್ಲಿ ಕೃಷಿ ಇಲಾಖೆ ಶೇ90 ಸಹಾಯಧನದಲ್ಲಿ ನೀಡಿರುವ ಹನಿ ನೀರಾವರಿ ಘಟಕ ಪರಿಶೀಲಿಸಿ ಮಾತನಾಡಿದ ಅವರು, ಅಫಜಲಪುರ ತಾಲ್ಲೂಕಿನಲ್ಲಿ 476 ಹೆಕ್ಟೆರ್ ಹನಿನೀರಾವರಿ ಅಳವಡಿಸಲಾಗಿದೆ. ಸಾವಿರ ಸ್ಪಿಂಕ್ಲರ್ ಪರಿಕರಗಳನ್ನು ಶೇ 90 ಸಹಾಯಧನದಲ್ಲಿ ನೀಡಲಾಗಿದೆ. ಎಲ್ಲ ರೈತರು ಸರಿಯಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.
ಬಂದರವಾಡ ಗ್ರಾಮದಲ್ಲಿ ನೀರು ಕಡಿಮೆ ಇದ್ದರೂ, ಹನಿ ನೀರಾವರಿ ಬಳಸಿಕೊಂಡು ಅಲ್ಲಿಯ ರೈತರು 4– 5 ಎಕರೆ ಕಬ್ಬು ಬೆಳೆ ಮಾಡಿಕೊಂಡಿದ್ದಾರೆ. ಬಳೂರ್ಗಿ, ಶಿರವಾಳ, ಮಲ್ಲಾಬಾದ ಗ್ರಾಮಗಳಲ್ಲಿ ಹೆಚ್ಚಿನ ರೈತರು ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿ ಬಳಸುವುದರಿಂದ ಶೇ30 ಲೀಟರ್ ನೀರನ್ನು ಉಳಿತಾಯ ಮಾಡಬಹುದು. ನಿರ್ವಹಣೆ ಸಮಸ್ಯೆ ಇಲ್ಲ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃಷಿ ಹೊಂಡವನ್ನು ತಾಲ್ಲೂಕಿಗೆ ಮಂಜೂರು ಮಾಡಲಾಗುವುದು ಎಂದರು.
ಸಣ್ಣ ರೈತರಿಗೂ ಕೃಷಿ ಹೊಂಡ ತೋಡಲು ಅರ್ಜಿ ಕರೆಯಲಾಗಿದೆ. ಅವು ಸಹ ಏಪ್ರಿಲ್ ಕೊನೆಯ ವಾರದಲ್ಲಿ ರೈತರಿಗೆ ಕಾರ್ಯಾದೇಶ ನೀಡಲಾಗುವದು. ಕೃಷಿ ಹೊಂಡ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತಿದೆ. ಕೊಳವೆಬಾವಿಗಳಿಗೆ ಮತ್ತು ತೆರೆದ ಬಾವಿಗಳಿಗೆ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಹನಿ ನೀರಾವರಿ ಅಳವಡಿಸಲು ರೈತರಿಗೆ ಅನುಕೂಲ ಮಾಡಿಕೊಡಲು ಆಲೋಚನೆ ಇದೆ. ಪರಿಶಿಷ್ಟರಿಗೆ ಸದ್ಯಕ್ಕೆ ಅನುದಾನವಿದೆ.ಆ ರೈತರು ಹನಿ ನೀರಾವರಿಗೆ ಅರ್ಜಿ ಸಲ್ಲಿಸಹುದು ಎಂದರು.ಕೃಷಿ ಇಲಾಖೆಯಲ್ಲಿ ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ರೈತರಿಗೂ ಸಮನಾಗಿ ಕೃಷಿ ಪರಿಕರಗಳನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ರೈತರು ಮಾಗಿ ಉಳಿಮೆ ಆರಂಭಿಸಿದ್ದಾರೆ. ಇನ್ನೊಂದೆಡೆ ಕಬ್ಬು ನಿರ್ವಹಣೆ ನಡೆದಿದೆ. ರೈತರಿಗೆ ಕಬ್ಬಿನ ಬೆಳೆ ಬಗ್ಗೆ ಮಾಹಿತಿ ಬೇಕಾದರೆ ಅಫಜಲಪುರ, ಕರಜಗಿ, ಅತನೂರ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡಪಾಟೀಲ ತಿಳಿಸಿದರು.
ಕೃಷಿ ತಾಂತ್ರಿಕ ಅಧಿಕಾರಿ ಸರ್ದಾರ್ಭಾಷಾ ನದಾಫ್ ಹಾಗೂ ಹನಿ ನೀರಾವರಿ ಏಜೆನ್ಸಿ ಕಂಪೆನಿ ಮಾಲೀಕರಾದ ಅಂಜು ಕುಲಕರ್ಣಿ, ಕಲ್ಯಾಣರಾವ್ ಪಾಟೀಲ ಹಳ್ಯಾಳ ಹಾಗೂ ಮೋತಿರಾಮ ರಾಠೋಡ, ರಾಮು ಕಾಂಬಳೆ, ಸುಭಾಷ್ ಕಾಂಬಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.