ಮಸ್ಕಿ: ಜಿಲ್ಲೆಯ ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ನೀರು ಬಿಡಲಾಗಿದ್ದು, ಅದರ ಅವಧಿಯನ್ನು ಏ. 25 ರ ವರೆಗೆ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಪ್ರತಾಪಗೌಡ ಪಾಟೀಲ ಇಲ್ಲಿ ಹೇಳಿದರು.
ಶನಿವಾರ ಪಟ್ಟಣದ ಕುಡಿಯವ ನೀರಿನ ಕೆರೆ ಹಾಗೂ ಹೊಸ ಕೆರೆ ನಿರ್ಮಾಣದ ಕಾಮಗಾರಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಏ. 22 ರವರೆಗೆ ಮಾತ್ರ ಕಾಲುವೆ ನೀರು ಎಂದು ಜಿಲ್ಲಾಡಳಿತ ತಿಳಿಸಿದೆ.
ಆದರೆ. ಈ ಅವಧಿಯಲ್ಲಿ ಗ್ರಾಮಗಳ ಕುಡಿಯುವ ನೀರಿನ ಕೆರೆ ತುಂಬಿಸಿಕೊಳ್ಳುವುದು ಅಸಾಧ್ಯ ಎಂದರು. ಏ. 25ರ ವರೆಗೆ ನೀರು ಬಿಟ್ಟರೆ ಕೆಲ ಮಟ್ಟಿಗೆ ನೀರಿನ ಅಭಾವ ಕಡಿಮೆಯಾಗುವುದು ಎಂದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೆಲ ಗ್ರಾಮಗಳಲ್ಲಿ ಅಂತರ್ಜಲ ಬತ್ತಿಹೋಗಿ ನೀರಿನ ಸಮಸ್ಯೆ ಉಂಟಾಗಿದೆ. ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಮುಂದಾಗಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣದ ಕುಡಿಯವ ನೀರಿನ ಕೆರೆ ಮೂರು ನಾಲ್ಕು ದಿನಗಳಲ್ಲಿ ತುಂಬಲಿದೆ. 14ನೇ ಹಣಕಾಸು ಯೋಜನೆಯ ₹ 25 ಲಕ್ಷ ವೆಚ್ಚದಲ್ಲಿ ಕೆರೆಯ ಪಕ್ಕದಲ್ಲಿ ಮತ್ತೊಂದು ಕೆರೆ ನಿರ್ಮಾಣ ನಡೆದಿದೆ. ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಪುರಸಭೆ ಉಪಾಧ್ಯಕ್ಷ ರವಿಕುಮಾರ ಪಾಟೀಲ, ಕಾಂಗ್ರೆಸ್ ಪಕ್ಷದ ಮಸ್ಕಿ ಘಟಕದ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಡಾ.ಬಿ.ಎಚ್. ದಿವಟರ್, ರಾಜಾ ನಾಯಕ, ಬಸನಗೌಡ ಪೊಲೀಸ್ ಪಾಟೀಲ, ಮಲ್ಲಯ್ಯ ಬಳ್ಳಾ, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಪುರಸಭೆ ಸದಸ್ಯರು ಇದ್ದರು.