ಹಳಿಯಾಳ: ಪಟ್ಟಣದ ಪ್ರತಿ ಬಡಾವಣೆ ಭಂಡಾರಮಯ, ಭಾರಿ ಜಯಘೋಷ, ಗ್ರಾಮದೇವಿ ಉಡಚಮ್ಮ ಹಾಗೂ ದೇಮವ್ವ ದೇವಿಯ ಹೊನ್ನಾಟಕ್ಕೆ ಅದ್ಧೂರಿ ಸ್ವಾಗತ. ಶನಿವಾರ ನಾಲ್ಕನೇ ದಿನಕ್ಕೆ ಗ್ರಾಮದೇವಿಯ ಹೊನ್ನಾಟ.ಶುಕ್ರವಾರ ಬೆಳಿಗ್ಗೆ ಬೆಳ್ಳಿಗ್ಗೆ ಗ್ರಾಮದೇವಿ ಗಲ್ಲಿ, ಮಹಾವೀರ ಗಲ್ಲಿ, ಕಿಲ್ಲೆ ಏರಿಯಾ, ಬಸವಣ್ಣ ಗಲ್ಲಿ, ಟಿಳಕ ರಸ್ತೆ, ಶಿವಾಜಿ ಗಲ್ಲಿ, ಕುಂಬಾರ ಗಲ್ಲಿಯಲ್ಲಿ ವೈಭವದಿಂದ ಹೊನ್ನಾಟ ನಡೆಯಿತು. ಬಡಾವಣೆಗಳಲ್ಲಿ ಗ್ರಾಮದೇವಿ ಹೊನ್ನಾಟಕ್ಕೆ ಸಾಗುತ್ತಿದ್ದಂತೆ ಪ್ರತಿ ಮನೆಯ ಮುಂದೆ ದೇವಿಗೆ ಉಡಿ ತುಂಬುವ ಸಲುವಾಗಿ ಆಸನದ ವ್ಯವಸ್ಥೆ ಮಾಡಲಾಗಿತ್ತು.
ಗೋಲಿ ಹಾಗೂ ಹೂಗಳಿಂದ ಸಿಂಗರಿಸಿ ದೇವಿಯನ್ನು ಅದ್ಧೂರಿಯಿಂದ ಬರಮಾಡಿಕೊಂಡು ಉಡಿ ತುಂಬುವುದು ಹಾಗೂ ವಿವಿಧ ಪೂಜೆ ಪುನಸ್ಕಾರ ನಡೆದವು. ಬಿಸಿಲಿನ ತಾಪ ಹೆಚ್ಚಾಗಿ ಕಾಣಬರುತ್ತಿರುವುದರಿಂದ ಬಡಾವಣೆ ನಿವಾಸಿಗಳು ಅಲ್ಲಲ್ಲಿ ರಾಗಿ ಅಂಬಲಿ, ತಂಪುಪಾನೀಯ ವಿತರಣೆ ಮಾಡುತ್ತಿರುವುದು ಕಂಡು ಬಂತು. ಎಲ್ಲ ಬೀದಿಗಳಲ್ಲೂ ಜನಜಂಗುಳಿ ಇತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಸಿ.ಸಿ. ಟಿವಿ ಕ್ಯಾಮೆರಾ ಕೂಡ ಅಳವಡಿಸಲಾಗಿದ್ದು, ಪ್ರತಿ ಚಟುವಟಿಕೆಯ ಮೇಲೆ ನಿಗಾ ಇಡುತ್ತಿರುವುದು ಕಂಡು ಬಂತು. ಪುರಸಭೆಯಿಂದ ತಾತ್ಕಾಲಿಕ ಶೌಚಾಲಯ, ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಹೊನ್ನಾಟದಲ್ಲಿ ಸಚಿವ ದೇಶಪಾಂಡೆಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಶ್ರೀದೇವಿಗೆ ಪೂಜೆ ಸಲ್ಲಿಸಿ ಹೊನ್ನಾಟದಲ್ಲಿ ಪಾಲ್ಗೊಂಡರು. ನಂತರ ಬಜಾರ ಗಲ್ಲಿ, ಮುಖ್ಯ ಬೀದಿ, ಸುಭಾಷ ರಸ್ತೆ, ರಾಮದೇವ ಗಲ್ಲಿ, ಮಾರುತಿ ಗಲ್ಲಿಯಲ್ಲಿ ಹೊನ್ನಾಟ ಸಾಗಿತು.ಗ್ರಾಮದೇವಿ ಹೊನ್ನಾಟ ಸಾಗುವಾಗ ಟ್ಯಾಂಕರ್ ಮೂಲಕ ರಸ್ತೆಯನ್ನು ತಂಪಾಗಿಸಲು ನೀರು ಸುರಿಸಿ ದೇವಿಯ ಉತ್ಸವಕ್ಕೆ ಅನುವು ಮಾಡಿಕೊಡಯಿತು.
ಎ ವಾರ್ಡ್ನ ಬಜಾರ ಗಲ್ಲಿ, ಮುಖ್ಯ ಬೀದಿ, ಸುಭಾಷ ರಸ್ತೆ, ರಾಮದೇವ ಗಲ್ಲಿ, ಮಾರುತಿ ಗಲ್ಲಿ, ಇಂದಿರಾ ನಗರ, ಬಸ್ ನಿಲ್ದಾಣ ರಸ್ತೆ, ಮೋತಿಕೆರೆ ಹಿಂದಿನ ಭಾಗ, ಗಣಪತಿ ಗಲ್ಲಿ ಭಾಗದಲ್ಲಿ ದೇವಿಯ ಹೋನ್ನಾಟ ನಡೆಯಿತು. ಭಾನುವಾರ ಬಿ ವಾರ್ಡ್ನಲ್ಲಿ ದೇವಿಯ ಹೊನ್ನಾಟ ನಡೆಯಲಿದ್ದು, 17 ರಂದು ರಥೋತ್ಸವ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.