ಬೆಂಗಳೂರು: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನಡುವೆ ಹೋಲಿಕೆ ಮಾಡಲು ಹೋಗಿ, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಅವರು ಟ್ವಿಟರ್ ಬಳಕೆದಾರರ ಕೋಪಕ್ಕೆ ತುತ್ತಾಗಿದ್ದಾರೆ.
ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮುಷರಫ್ ಜೊತೆಗಿನ ಸಂದರ್ಶನ ಪ್ರಸಾರ ಮಾಡಲಿದ್ದೇವೆ’ ಎಂದು ಇಂಗ್ಲಿಷ್ ಸುದ್ದಿವಾಹಿನಿಯೊಂದು ಹೇಳಿಕೊಂಡಿತ್ತು.
ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಅಬ್ದುಲ್ಲಾ, ‘ಇದು ಭಾರತದಲ್ಲಿನ ವಿದ್ಯಮಾನಗಳ ಬಗ್ಗೆ ಪಾಕಿಸ್ತಾನದ ವಾಹಿನಿಗಳು ದೇವೇಗೌಡರ ಜೊತೆ ಮಾತುಕತೆ ನಡೆಸುವುದಕ್ಕೆ ಸಮ’ ಎಂದು ಹೇಳಿದ್ದರು.
ಟ್ವಿಟರ್ನಲ್ಲಿ ದೇವೇಗೌಡರ ಬೆಂಬಲಕ್ಕೆ ಬಂದ ಬಿಜೆಪಿ ಶಾಸಕ ಸಿ.ಟಿ. ರವಿ, ‘ಪಲಾಯನವಾದಿ, ಮೋಸಗಾರ ಅಬ್ದುಲ್ಲಾ ಕುಟುಂಬದವರು
ಕನಸಿನಲ್ಲಿ ನೀಡುವುದಕ್ಕಿಂತ ಹೆಚ್ಚಿನ ಕೊಡುಗೆಯನ್ನು ದೇಶಕ್ಕೆ ದೇವೇಗೌಡರು ವಾಸ್ತವದಲ್ಲಿ ನೀಡಿದ್ದಾರೆ’ ಎಂದು ಹೇಳಿದ್ದಾರೆ.
‘ದೇವೇಗೌಡರು ಮಣ್ಣಿನ ಮಗ. ನಿಮ್ಮ ಅಪ್ಪನ ರೀತಿ ಚುನಾವಣೆಯಲ್ಲಿ ಗೆಲ್ಲಲು ಬಣ್ಣ ಬದಲಿಸುವ ಊಸರವಳ್ಳಿ ಅಲ್ಲ’ ಎಂದು ದೀಪಕ್ ಖೆಮಾನಿ ಎನ್ನುವವರು ಒಮರ್ ಅವರಿಗೆ ಮಾತಿನ ಏಟು ನೀಡಿದ್ದಾರೆ.
ಒಮರ್ ಮಾತುಗಳಿಗೆ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿಲ್ಲ. ‘ಒಮರ್ ಅವರು ರಾಜಕೀಯ ಉಳಿವಿಗಾಗಿ ದೇವೇಗೌಡರ ಬಗ್ಗೆ ಅಗೌರವದ ಹೇಳಿಕೆ ನೀಡಿದ್ದಾರೆ’ ಎಂದು ಜೆಡಿಎಸ್ ಶಾಸಕ ರಮೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ.