ಕೋಲಾರ: ‘ನಾನು ವಚನ ಭ್ರಷ್ಟನಾಗುವುದಿಲ್ಲ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು ಎಂಬುದೇ ನನ್ನ ಗುರಿ’ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ಕುಮಾರ್ ತಿಳಿಸಿದರು.
ತಾಲ್ಲೂಕಿನ ನರಸಾಪುರ ಕೆರೆಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಅವಿಭಜಿತ ಕೋಲಾರ ಜಿಲ್ಲೆಯ ಕೆರೆಗಳಿಗೆ ಆಗಸ್ಟ್ 15ಕ್ಕೆ ಆಗದಿದ್ದರೂ ನವೆಂಬರ್ ವೇಳೆಗೆ ನೀರು ಹರಿಸುವುದು ಖಚಿತ’ ಎಂದರು.
‘ಇನ್ನು ಒಂದೂವರೆ ವರ್ಷದಲ್ಲಿ ಎತ್ತಿನ ಹೊಳೆಯ ಯೋಜನೆಯಿಂದ ನೀರು ಬರುವ ನಿರೀಕ್ಷೆಯಿದೆ. ಬೈರಗೊಂಡ್ಲು ಬಳಿ ಖಾಸಗಿಯವರಿಂದ ಜಮೀನು ಖರೀದಿಸಿ ಸ್ವಾಧೀನಕ್ಕೆ ಪಡೆದ ನಂತರ ಕಾಮಗಾರಿ ನಡೆಯಲಿದೆ. ತುಮಕೂರು ಸಂಸದ ಎಸ್.ಪಿ. ಮುದ್ದಹನುಮೇಗೌಡ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
‘ಕೆಸಿ ವ್ಯಾಲಿಯಲ್ಲಿ 440 ಎಂಎಲ್ಡಿ ನೀರು ಹರಿಯುತ್ತದೆ. ಯಾವುದೇ ಅನುಮಾನ ಬೇಡ. ಇದು ಜಿಲ್ಲೆಯ ಜನರಲ್ಲಿ ನಂಬಿಕೆ ಮೂಡಿಸುವ ಯೋಜನೆಯಾಗಿದೆ. ನಾನು ವಚನಭ್ರಷ್ಟನಲ್ಲ. ಯೋಜನೆ ಪೂರ್ಣಗೊಳಿಸುವ ಕುರಿತಾಗಿ ಸರ್ಕಾರದಿಂದ ನನಗೆ ಸಂಪೂರ್ಣ ಅಧಿಕಾರ ಸಿಕ್ಕಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ತ್ರಿಲೋಕಚಂದ್ರ ಮಾತನಾಡಿ, ‘ಮೊದಲ ಹಂತದಲ್ಲಿ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ. ನಗರ ಸಮೀಪದ ಕೋಡಿಕಣ್ಣೂರು ಮತ್ತು ಕೋಲಾರಮ್ಮ ಕೆರೆಗಳನ್ನು ಪುನಶ್ಚೇತನಗೊಳಿಸಲು ಮೆಘಾ ಕಂಪೆನಿಯವರು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.