ಹರಿಹರ: ‘ಹಿಂದುಳಿದ ಸಮಾಜಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದರೇ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ’ ಎಂದು ಶಾಸಕ ಎಚ್.ಎಸ್. ಶಿವಶಂಕರ್ ಹೇಳಿದರು.
ನಗರದ ಮಾರ್ಕಾಂಡೇಶ್ವರ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ನೇಕಾರ ಸಮು ದಾಯಗಳ ಒಕ್ಕೂಟದಿಂದ ಭಾನುವಾರ ನಡೆದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿದರು.
‘ಹಿಂದುಳಿದ ಸಮಾಜಗಳು ಸಂಘಟಿತವಾಗಿ ಹೋರಾಟ ನಡೆಸುವ ಮೂಲಕ ತಮ್ಮ ಹಕ್ಕಿನ ಸಾಂವಿಧಾನಿಕ ಹಕ್ಕನ್ನು ಪಡೆಯಬಹುದು.
ಈ ನಿಟ್ಟಿನಲ್ಲಿ ಹಿಂದುಳಿದ ಸಮಾಜಗಳು ಚಿಂತನೆ ನಡೆಸುವುದು ಅನಿವಾರ್ಯ’ ಎಂದರು.
ಎಲ್ಲ ಸಮಾಜಗಳೊಂದಿಗೆ ಸಾಮರಸ್ಯದಿಂದ ಬೆರೆತು ಜೀವಿಸುವುದೇ ಶ್ರೇಷ್ಠತೆ ಎಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ದೇವರ ದಾಸಿಮಯ್ಯ. ಅವರ ತತ್ವ ಮತ್ತು ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತ್ಯುತ್ಸವವನ್ನು ಅರ್ಥಪೂರ್ಣಗೊಳಿಸಿ’ ಎಂದರು.
‘ನೇಕಾರ ಸಮಾಜದ ಅಭಿವೃದ್ಧಿಗಾಗಿ ₹ 10 ಲಕ್ಷ ಅನುದಾನ ನೀಡಲಾಗು ವುದು’ ಎಂದು ಭರವಸೆ ನೀಡಿದರು.
ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ನಾಗರಾಜ ಭಂಡಾರೆ ಮಾತನಾಡಿ, ‘ಮಹಾನ್ ವ್ಯಕ್ತಿಗಳನ್ನು ಹಾಗೂ ಶ್ರೇಷ್ಠ ಚಿಂತಕರನ್ನು ಒಂದು ಜಾತಿ, ಜನಾಂಗ ಅಥವಾ ಧರ್ಮಕ್ಕೆ ಸೀಮಿತ ಗೊಳಿಸುತ್ತಿರುವುದು ವಿಪ ರ್ಯಾಸ. ಸಮಸ್ತ ಮನುಕುಲದ ಶ್ರೇಯಸ್ಸಿಗೆ ಅವರ ಚಿಂತನೆಗಳು ಅಗತ್ಯವಾಗಿವೆ’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ನೇಕಾರ ಸಮಾಜ ಬಾಂಧವರು ಭಾಗವಹಿಸಿದ್ದರು.
ತಾಲ್ಲೂಕು ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷ ಜಿ. ಮಹಾದೇವಪ್ಪ, ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ, ದೇವಾಂಗ ಸಮಾಜದ ಅಧ್ಯಕ್ಷ ಪ್ರಕಾಶ ಕೊಳೂರ, ಪದ್ಮಸಾಲಿ ಸಮಾಜದ ಅಧ್ಯಕ್ಷ ಪಿ.ಎನ್. ಗೋಪಿ, ಪಟ್ಟಸಾಲಿ ಸಮಾಜದ ಅಧ್ಯಕ್ಷೆ ಕೆ.ಜಿ. ಸಾವಿತ್ರಮ್ಮ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ವಿಠ್ಠಲರಾವ್ ಭಂಡಾರಿ, ತೊಗಟವೀರ ಸಮಾಜದ ಅಧ್ಯಕ್ಷ ಕೇಶವ ಮುದುಗಲ್ ಇದ್ದರು.