ಶಿವಮೊಗ್ಗ: ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳು ಭಾಗವಹಿಸದ ಕಾರಣ ಆಕಾಂಕ್ಷಿಗಳು ನಿರಾಸೆಗೊಂಡು, ಪ್ರತಿಭಟನೆ ನಡೆಸಿದರು.
ಜೊರ್ಬಾ ಲರ್ನಿಂಗ್ ತರಬೇತಿ ಸಂಸ್ಥೆ, ಸಮನ್ವಯ ಯೋಜನಾ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಮೊದಲೇ ತಿಳಿಸಿರುವಂತೆ ಎಚ್ಡಿಎಫ್ಸಿ, ಟಯೋಟಾ, ಐಬಿಎಂ, ಇನ್ಫೊಸಿಸ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಕಂಪೆನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗ ವಹಿಸಿಲ್ಲ. ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡಿದಂತಹ ಅಭ್ಯರ್ಥಿ ಗಳಿಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯ ಉದ್ಯೋಗ ನೀಡಲು ಕಂಪೆನಿಗಳು ಮುಂದಾಗಿವೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಮಾರುತಿ ಸುಜುಕಿ, ಆಕ್ಸೆಂಚರ್, ಎಕ್ಸೆಚೇಂಜಿಗ್, ಜಸ್ಟ್ ಡಯಲ್, ಐಸಿಐಸಿಐ ಕಂಪೆನಿಗಳು ಮಾತ್ರ ಭಾಗವಹಿಸಿವೆ. ಕೂಡಲೇ ನೋಂದಣಿ ಶುಲ್ಕ ವಾಪಸ್ ನೀಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದರು.
ತಕ್ಷಣವೇ ಮೇಳದ ವ್ಯವಸ್ಥಾಪಕರು ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ತೀವ್ರ ಅಸಮಾಧಾನಗೊಂಡಿದ್ದ ಆಕಾಂಕ್ಷಿಗಳು ತಮ್ಮ ಪಟ್ಟು ಸಡಿಲಿಸಲಿಲ್ಲ. ಆಗ ಉದ್ಯೋಗ ಮೇಳದ ವ್ಯವಸ್ಥಾಪಕರು ₹200 ಹಣವನ್ನು ಉದ್ಯೋಗಾ ಕಾಂಕ್ಷಿಗಳಿಗೆ ಹಿಂದಿರುಗಿಸಿದರು.
ವಿವರ: ಮುಂಜಾನೆ 8 ಗಂಟೆಯಿಂದಲೇ ವಿವಿಧೆಡೆಯಿಂದ ಬಂದಿದ್ದ ಯುವಕ, ಯುವತಿಯರು ಎಟಿಎನ್ಸಿ ಕಾಲೇಜಿನ ಆವರಣದಲ್ಲಿ ಜಮಾವಣೆಯಾಗಿದ್ದರು. ಬಿಸಿಲನ್ನು ಲೆಕ್ಕಿಸದೇ, ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸಿದ್ದರು. ಶಿವಮೊಗ್ಗ ಜಿಲ್ಲೆ ಜತೆಗೆ ದಾವಣೆಗೆರೆ, ಚಿತ್ರದುರ್ಗ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಸಾವಿರಾರು ಆಕಾಂಕ್ಷಿಗಳು ಭಾಗವಹಿಸಿದ್ದರು.
ಎಸ್ಎಸ್ಎಲ್ಸಿ, ಪಿಯು, ಪದವಿ ಮತ್ತು ಸ್ನಾತಕೋತ್ತರ ಪದವಿ, ಎಂಜಿನಿ ಯರಿಂಗ್ನ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಅನುಭವ ಇರುವವರೂ ಮೇಳದಲ್ಲಿ ಅರ್ಜಿ ಹಿಡಿದುಕೊಂಡು ಬಂದ ದೃಶ್ಯ ಕಂಡುಬಂದಿತು.
***
ಮೇಳಕ್ಕೆ ಶಾಸಕರಿಂದ ಚಾಲನೆ
‘ಉದ್ಯೋಗ ಮೇಳ ಆಯೋಜನೆ ಯಿಂದ ಯುವಸಮೂಹದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಹೇಳಿದರು.
ಉದ್ಯೋಗ ಮೇಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅವಕಾಶಗಳ ದಾರಿಯಲ್ಲಿ ಸಾಗಲು ಇಂಥ ಮೇಳ ಸಹಕಾರಿ’ ಎಂದರು.
ಬೆಂಗಳೂರಿನ ಸಂಜಯ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ‘ಅಂತಿಮ ವರ್ಷದ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗ ಮೇಳದಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದರು.
ಜೊರ್ಬಾ, ಸಾನ್ ಐಟಿ ಸಲ್ಯೂಷನ್, ಆಕ್ಸೆಂಚರ್, ಮಾರುತಿ ಸುಜುಕಿ, ಹಲವು ಕಂಪೆನಿಗಳು ಭಾಗವಹಿಸಿದ್ದವು. ಜೊರ್ಬಾ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಾನ್ ಐಟಿ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ಸಿದ್ದೇಶ್ ಲೋನಿ, ಸಮನ್ವಯ ಕಾಶಿ ಇದ್ದರು.