ಲಕ್ಷೇಶ್ವರ: ಗೋವಾದಲ್ಲಿ ಬಂಜಾರ ಸಮುದಾಯವನ್ನು ನಿಷೇಧಿಸಬೇಕು ಎಂದು ಅಲ್ಲಿಯ ಪ್ರವಾಸೋದ್ಯಮ ಸಚಿವ ಬಾಬು ಅಜಗಾಂವಕರ ಹೇಳಿಕೆ ಇಡೀ ಸಮಾಜಕ್ಕೆ ಮಾಡಿದ ಅವಮಾನ. ಇದಕ್ಕೆ ಸಚಿವರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದರು.
ಇಲ್ಲಿಯ ತಹಶೀಲ್ದಾರರಿಗೆ ಶನಿವಾರ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಎಲ್ಲಿಯೇ ನೆಲೆಸುವಂತಹ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಗೋವಾದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಲಂಬಾಣಿ ಸಮಾಜದವರ ವಿರುದ್ಧ ಸಚಿವರು ಈ ರೀತಿ ಹೇಳಿಕೆ ನೀಡಿರುವುದರಿಂದ ಅವರು ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ತಿಳಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದನ್ನು ಬಿಟ್ಟು ಇಡೀ ಸಮಾಜ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎನ್ನುವ ಸಚಿವರ ಮಾತಿನಿಂದ ಸಮಾಜಕ್ಕೆ ನೋವಾಗಿದ್ದು ಕೂಡಲೇ ಅಲ್ಲಿನ ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆಯನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಗೋವಾ ಮುಖಮಂತ್ರಿ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ನಿರ್ಲಕ್ಷ್ಯ ತೋರಿದರೆ ಲಂಬಾಣಿ ಸಮಾಜದಿಂದ ಹೋರಾಟ ರೂಪಿಸಲಾಗುತ್ತದೆ ಎಂದರು.
ತಾಂಡಾ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಲಮಾಣಿ, ಪುರಸಭೆ ಅಧ್ಯಕ್ಷ ರಾಜಣ್ಣ ಕುಂಬಿ, ಬಸವರಾಜ ಓದಾನವರ, ಗಂಗಾಧರ ಮ್ಯಾಗೇರಿ, ತಿಪ್ಪಣ್ಣ ಸಂಶಿ, ಸೋಮಣ್ಣ ಲಮಾಣಿ, ನಾನಪ್ಪ ಲಮಾಣಿ, ಶಂಕರ ಕಾರಭಾರಿ, ಪರಮೇಶ ಇದ್ದರು.