ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿಗೆ ಜಿಲ್ಲಾಧಿಕಾರಿಯವರು ಮಾದ್ರೆ ಹೊಸಳ್ಳಿ ಗ್ರಾಮದಲ್ಲಿ ಮಂಜೂರು ಮಾಡಿರುವ ಜಾಗವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಶನಿವಾರ ಸಂಜೆ ಪರಿಶೀಲಿಸಿದರು.
ಬಳಿಕ ಅವರು ಮಾತನಾಡಿ, ದುಂಡಳ್ಳಿ ಗ್ರಾಮದ ಸರ್ವೆ ನಂ.42/2ರ ಜಾಗ ಹಾಗೂ ಮಾದ್ರೆ ಹೊಸಳ್ಳಿ ಗ್ರಾಮದ ಸರ್ವೆ ನಂ.36ರ ಜಾಗವನ್ನು ಪರಿಶೀಲನೆ ಮಾಡಿರುವೆ.ಜಾಗದ ದಾಖಲಾತಿಗಳನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ತಿಳಿಸಲಾಗಿದೆ ಎಂದರು.
ಶಾಸಕ ಅಪ್ಪಚ್ಚುರಂಜನ್ ಜಾಗ ಪರಿಶೀಲನೆ ಮಾಡಿ ಹಿಂತಿರುಗುತ್ತಿದ್ದಾಗ ಮಾದ್ರೆಹೊಸಳ್ಳಿ ಗ್ರಾಮದ ಕೆಲ ಯುವಕರು ಶಾಸಕರ ಕಾರನ್ನು ತಡೆದು ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ಮಾದ್ರೆಹೊಸಳ್ಳಿ ಗ್ರಾಮದಲ್ಲಿ ಜಾಗ ನೀಡಲು ವಿರೋಧ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಮಾಡುವುದರಿಂದ ಆ ಜಾಗದಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಹಾಗೂ ನವಿಲು ಮತ್ತಿತರ ಪ್ರಾಣಿಗಳಿಗೆ ರೋಗರುಜಿನ ಹರಡುವ ಸಂಭವ ವಿರುವುದರಿಂದ ಆ ಜಾಗ ನೀಡದಿರು ವಂತೆ ಗ್ರಾಮಸ್ಥರಾದ ಡಿ.ಪಿ. ವೇದ ಮೂರ್ತಿ, ದುಷ್ಯಂತ್, ದಾಮೋದರ್, ಮಣಿಕಂಠ ರಜನಿ, ಬಿಂದಮ್ಮ ಆಗ್ರಹಿಸಿದರು.
ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಗೌಸ್, ಪಿಡಿಒ ಹರೀಶ್, ದುಂಡಳ್ಳಿ ಗ್ರಾ. ಪಂ. ಅಧ್ಯಕ್ಷ ಸಿ.ಜೆ.ಗಿರೀಶ್, ಸದಸ್ಯರಾದ ಎನ್.ಕೆ.ಸುಮತಿ, ಯೋಗೇಂದ್ರ, ಪಿಡಿಒ ವೇಣು ಗೋಪಾಲ್, ಇಒ ಚಂದ್ರಶೇಖರ್, ಗ್ರಾಮಸ್ಥರಾದ ಕೆ.ಟಿ.ಹರೀಶ್, ಸುಬ್ರಮಣಿ ಹಾಜರಿದ್ದರು.