ಕಾರವಾರ: ಬೈಪಾಸ್ ನಿರ್ಮಾಣವನ್ನು ಕೈಬಿಟ್ಟಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ತಾಲ್ಲೂಕಿನಲ್ಲಿ ಪ್ರಸ್ತುತ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರಲ್ಲಿಯೇ ಚತುಷ್ಪಥ ಮಾಡಲು ತೀರ್ಮಾನಿಸಿದೆ.
‘ಬೈಪಾಸ್ಗೆ ಗೊತ್ತುಪಡಿಸಿರುವ ಭೂಮಿಯು ಭಾಗಶಃ ಅರಣ್ಯ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿನ ಭೂ ಸ್ವಾಧೀನಕ್ಕೆ ಅರಣ್ಯ ಇಲಾಖೆ ಅನುಮತಿ ಅಗತ್ಯವಾಗಿದ್ದು, ಈ ಪ್ರಕ್ರಿಯೆ ತುಂಬಾ ಸಮಯ ಹಿಡಿಯುತ್ತದೆ. ಅಲ್ಲದೇ ಈ ಭಾಗದ ಕೆಲ ಖಾಸಗಿ ಭೂಮಿ ಮಾಲೀಕರು ಬೈಪಾಸ್ಗೆ ವಿರೋಧ ವ್ಯಕ್ತಪಡಿಸಿದ್ದು, ಸರ್ವೇ ಕಾರ್ಯಕ್ಕೂ ಅಡ್ಡಗಾಲು ಹಾಕಿದ್ದಾರೆ’ ಎಂದು ಎನ್ಎಚ್ಎಐಯು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
‘ತಾಲ್ಲೂಕಿನ ಅಮದಳ್ಳಿ, ತೋಡೂರು, ಚೆಂಡಿಯಾ ಹಾಗೂ ಅರಗಾದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲೇ ಚತುಷ್ಪಥ ಮಾಡಲು ಜಿಲ್ಲಾಡಳಿತ ಸಹಕರಿಸಬೇಕು. ಇದರಿಂದ ಈ ಯೋಜನೆಯನ್ನು ಶೀಘ್ರ ಮುಗಿಸಲು ಸಾಧ್ಯವಾಗಲಿದೆ’ ಎಂದು ಪ್ರಾಧಿಕಾರ ಕೋರಿದೆ.
ಚತುಷ್ಪಥಕ್ಕೆ ತಾಲ್ಲೂಕಿನ ಅಮದಳ್ಳಿ, ತೋಡೂರು, ಚೆಂಡಿಯಾ ಹಾಗೂ ಅರಗಾ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಸರ್ವೇ ಕಾರ್ಯಕ್ಕೂ ಸ್ಥಳೀಯರು ಅಡ್ಡಿ ಪಡಿಸಿದ್ದರು ಹಾಗೂ ಶಾಸಕ ಸತೀಶ್ ಸೈಲ್ ಮುಂದಾಳತ್ವದಲ್ಲಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ಹಾಗೂ ಅಮದಳ್ಳಿಯಿಂದ ಕಾರವಾರದವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು.
‘ಚತುಷ್ಪಥ ಕಾಮಗಾರಿಯಿಂದ ಅಮದಳ್ಳಿ, ತೋಡೂರು, ಚೆಂಡಿಯಾ ಹಾಗೂ ಅರಗಾ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ಭೂಮಿ ಹಾಗೂ ಮನೆಯನ್ನು ಕಳೆದುಕೊಳ್ಳಲಿವೆ. ಅಲ್ಲದೇ ಇದರಲ್ಲಿ ಬಹುಪಾಲು ಮಂದಿ ಸೀಬರ್ಡ್ ಯೋಜನೆಯಲ್ಲಿ ನಿರಾಶ್ರಿತರಾದವರು. ಈ ಯೋಜನೆಯಿಂದ ಅವರ ಬದುಕು ಮತ್ತೆ ಅತಂತ್ರವಾಗುತ್ತದೆ.
ಹೀಗಾಗಿ ಅಮದಳ್ಳಿಯಿಂದ ಅರಗಾದ ಐಎನ್ಎಸ್ ಪತಂಜಲಿ ಆಸ್ಪತ್ರೆವರೆಗೆ ಬೈಪಾಸ್ ಮಾಡಬೇಕು’ ಎಂದು ಸ್ಥಳೀಯರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಹೋರಾಟಗಾರರ ಬೆನ್ನಿಗಿದ್ದ ಶಾಸಕ ಸತೀಶ್ ಸೈಲ್ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಬೈಪಾಸ್ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.