ಶಿರಸಿ: ನಗರದ ಬನವಾಸಿ ರಸ್ತೆಯ ನೂರಾರು ಮನೆಗಳಿಗೆ ಜಲಪಾತ್ರೆಯಾಗಿರುವ ಗೊಲಗೇರಿಯ ಕೆರೆ ಹೂಳೆತ್ತುವ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಅರ್ಧ ಕೆಲಸ ಮುಗಿದು ತಿಂಗಳು ಕಳೆದರೂ ಕೆಲಸ ಪುನರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.ನಗರಸಭೆಯ 26ನೇ ವಾರ್ಡಿನಲ್ಲಿ ಸರ್ವೆಸಂಖ್ಯೆ 186ರಲ್ಲಿರುವ ಗೋಲಗೇರಿ ಕೆರೆ ಸಮೃದ್ಧ ಜಲ ಇರುವ ತಾಣ. ಎರಡು ಎಕರೆ ಪ್ರದೇಶದಲ್ಲಿರುವ ಈ ಕೆರೆಯ ದಂಡೆಯ ಮೇಲೆ ರಸ್ತೆ ಹಾದು ಹೋಗುತ್ತದೆ.
ಸುತ್ತಲಿನ ಮನೆಗಳಿಗೆ ಜಲಮೂಲವಾಗಿರುವ ಕೆರೆಯ ಹೂಳೆತ್ತಬೇಕು ಎಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಸ್ಥಳೀಯ ಉತ್ಸಾಹಿಗಳು ಸೇರಿ ರಚಿಸಿಕೊಂಡಿರುವ ವಿನೂತನ ಸೇವಾ ಟ್ರಸ್ಟ್ನ ವಿಶೇಷ ಪ್ರಯತ್ನದಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ₹ 4 ಲಕ್ಷ ಅನುದಾನ ಕೆರೆ ಹೂಳೆತ್ತುವ ಕಾಮಗಾರಿಗೆ ಮಂಜೂರು ಆಗಿತ್ತು. ಈ ಮೊತ್ತದಲ್ಲಿ ಕೆರೆಯ ಅರ್ಧಭಾಗದಲ್ಲಿ ಹೂಳು ತೆಗೆಯಲಾಗಿದೆ. ಈ ಕಾಮಗಾರಿ ಮುಗಿದು ಮೂರು ತಿಂಗಳು ಕಳೆದರೂ ಇನ್ನುಳಿದ ಕೆಲಸ ಆರಂಭವಾಗಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.
ಕೆರೆಯಲ್ಲಿ ಇನ್ನೂ ನಾಲ್ಕಾರು ಅಡಿ ಹೂಳೆತ್ತಿ ಆಳಗೊಳಿಸಬೇಕು. ಈಗಾಗಲೇ ತೆಗೆದಿರುವ ಮಣ್ಣನ್ನು ಪಕ್ಕಕ್ಕೆ ಹಾಕಿರುವುದರಿಂದ ಪಿಚ್ಚಿಂಗ್ಮಾಡದಿದ್ದರೆ ಮಳೆಗಾಲದಲ್ಲಿ ತೆಗೆದಿರುವ ಮಣ್ಣು ಮತ್ತೆ ಕೆರೆಯೊಳಗೆ ಬಂದು ಸೇರುತ್ತದೆ ಎನ್ನುತ್ತಾರೆ ಸ್ಥಳೀಯರು.ಗೋಲಗೇರಿ ಕೆರೆಯ ಆರಂಭದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಅದಕ್ಕಿಂತ ಮುಂದಿನ ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಗೃಹದವರೆಗೆ ತೆರಳುವ ಮಾರ್ಗ ಮಣ್ಣಿನ ರಸ್ತೆಯಾಗಿದೆ. 200 ಮೀಟರ್ ದೂರದ ಈ ರಸ್ತೆ ಅಭಿವೃದ್ಧಿಪಡಿಸಬೇಕು.
ಕೆರೆಯ ಮಣ್ಣುಕೆರೆಗೆ ಬಿದ್ದು, ಈಗಾಗಲೇ ವೆಚ್ಚ ಮಾಡಿರುವ ಹಣ ಮಣ್ಣಾಗಿ ಹೋಗುವ ಮೊದಲು ಕೆರೆ ಕಾಮಗಾರಿ ಪೂರ್ತಿಗೊಳಿಸಬೇಕು ಎಂದು ಹೆಸರು ಹೇಳಲಿಚ್ಛಿಸಿದ ಸ್ಥಳೀಯರೊಬ್ಬರು ಹೇಳಿದರು.‘ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಗೋಲಗೇರಿ ಕೆರೆ ಅಭಿವೃದ್ಧಿಗೆ ₹ 10 ಲಕ್ಷ ನಿಗದಿಪಡಿಸಲಾಗಿದೆ. ನಗರೋತ್ಥಾನ ಕಾಮಗಾರಿಯ ಕ್ರಿಯಾಯೋಜನೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಮಂಜೂರು ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.