ಕೊಳ್ಳೇಗಾಲ: ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ನಗರದದಲ್ಲಿ ಸುಸಜ್ಜಿತ ರಕ್ತನಿಧಿ ಸ್ಥಾಪಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ರೋಟರಿ ಜಿಲ್ಲೆ 3181 ಜಿಲ್ಲಾ ಗವರ್ನರ್ ಡಾ. ಆರ್.ಎಸ್. ನಾಗಾರ್ಜುನ್ ಭರವಸೆ ನೀಡಿದರು.
111ವರ್ಷಗಳ ಇತಿಹಾಸವಿರುವ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದುವುದು ಹೆಮ್ಮೆಯ ಸಂಗತಿ. ಏಕೆಂದರೆ ಮನುಕುಲದ ಸೇವೆಯನ್ನೇ ಗುರಿಯಾಗಿಸಿಕೊಂಡು ವಿಶ್ವದಾದ್ಯಂತ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿರುವ ಸಂಸ್ಥೆಯ ಸದಸ್ಯತ್ವ ಹೆಚ್ಚಳಕ್ಕೆ ರೋಟರಿ ಸದಸ್ಯರು ಮುಂದಾಗಬೇಕು ಎಂದು ಹೇಳಿದರು.
ನೂತನ ರೋಟರಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಲಾಗಿದೆ. ರೋಟರಿ ಸಂಸ್ಥೆಗೆ ಯುವಕರು ಮತ್ತು ಮಹಿಳೆಯರನ್ನು ಸೇರ್ಪಡೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಸದಸ್ಯರು ಗಮನಹರಿಸಬೇಕು ಎಂದು ತಿಳಿಸಿದರು.
ಕೊಳ್ಳೇಗಾಲ ರೋಟರಿ ಸಂಸ್ಥೆ 21 ರೋಟರಿ ಸಮುದಾಯ ದಳಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲೇ ಉತ್ತಮ ಸಾಧನೆಗೈದಿದೆ. ಈ ಸಂಸ್ಥೆಗಳ ಮೂಲಕ ಗ್ರಾಮೀಣ ಜನತೆಗೆ ಉತ್ತಮ ಸೇವೆಗಳು ದೊರೆತು ರೋಟರಿ ಇಮೇಜ್ ಹೆಚ್ಚಿಸಿದೆ ಎಂದರು ಹೇಳಿದರು.
ಮುಂದಿನ ವರ್ಷ ಅತೀ ಕಡಿಮೆ ವೆಚ್ಚದಲ್ಲಿ ಉಚಿತ ಮನೆ ನಿರ್ಮಾಣ ಯೋಜನೆ, ತೀರಾ ಹಿಂದುಳಿದ ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಸಹಾಯಕ ಗವರ್ನರ್ ಬಿ.ಕೆ. ಪ್ರಕಾಶ್ ಮಾತನಾಡಿ, ರೋಟರಿಯ ಜಿಲ್ಲಾ ಯೋಜನೆಗಳು ಗ್ರಾಮೀಣ ಪ್ರಗತಿಗೆ ಪೂರಕವಾಗಿವೆ ಎಂದು ತಿಳಿಸಿ ಜಿಲ್ಲಾ ಗವರ್ನರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಪ್ರವೀಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕಿರಣ್ಬಾಬು, ಉಪಾಧ್ಯಕ್ಷ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.