ಇಸ್ಲಾಮಾಬಾದ್ : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ಗೆ ಭಾರತದ ದೂತಾವಾಸ ಕಚೇರಿ ಸಂಪರ್ಕಿಸಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಸೇನೆ ಸ್ಪಷ್ಟಪಡಿಸಿದೆ.
‘ಜಾಧವ್ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಹಾಗಾಗಿ ಅವರು ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಯಿತು. ಇದು ಸೇನೆಯ ಕರ್ತವ್ಯ. ಈ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳಲಿಲ್ಲ. ಭವಿಷ್ಯದಲ್ಲೂ ಮಾಡುವುದಿಲ್ಲ’ಎಂದು ಎಂದು ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಪಾಕಿಸ್ತಾನದಿಂದ ಅಂತಹ ಯಾವುದೇ ಸಂದೇಶ ಬಂದಿಲ್ಲ ಎಂದು ಹೇಳಿದೆ.
ಭಾರತದ ದೂತಾವಾಸವನ್ನು ಸಂಪರ್ಕಿಸಲು ಅವಕಾಶ ನೀಡಬೇಕು ಎಂದು ಭಾರತ ಒಂದು ವರ್ಷದ ಅವಧಿಯಲ್ಲಿ 12ಕ್ಕೂ ಹೆಚ್ಚು ಬಾರಿ ಮನವಿ ಮಾಡಿತ್ತು.