ಸಾಗರ: ‘ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದರಿಂದ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು’ ಎಂದು ಮೇಕ್ ಇನ್ ಇಂಡಿಯಾ ಫೌಂಡೇಷನ್ ಸದಸ್ಯ ಜಿ.ನಾಗರಾಜ್ ಹೇಳಿದರು.
ಎಸ್ಎಂಇ ಮೇಕ್ ಇನ್ ಇಂಡಿಯಾ ಫೌಂಡೇಷನ್, ಜನಮನ ಟ್ರಸ್ಟ್ ಹಾಗೂ ಶೆಡ್ತಿಕೆರೆಯ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಸಾಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಮುಖ ಗುರಿಯಾಗಿದೆ. ಗ್ರಾಮೀಣ ಭಾರತದ ಬದುಕನ್ನು ಹಸ ನಾಗಿಸುವ ಆಶಯವನ್ನು ಈ ಯೋಜನೆ ಹೊಂದಿದೆ’ ಎಂದು ತಿಳಿಸಿದರು.
‘ಬದಲಾದ ಸನ್ನಿವೇಶದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವುದರಿಂದ ಉದ್ಯೋಗ ಸೃಷ್ಟಿಯ ಅವಕಾಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಿರು ಕೈಗಾರಿಕೆಗಳನ್ನು ಹಾಗೂ ಗ್ರಾಮೀಣ ಉದ್ದಿಮೆಯನ್ನು ಬೆಳೆಸುವ ಮೂಲಕ ಉದ್ಯೋಗ ಸೃಷ್ಟಿಯ ಕೊರತೆಯನ್ನು ತುಂಬುವ ಅಗತ್ಯವಿದೆ’ ಎಂದರು.
‘ಯೋಜನೆಯಡಿ ಕೃಷಿ ಹಾಗೂ ಅದಕ್ಕೆ ಸಂಬಂಧಪಟ್ಟ ಉದ್ದಿಮೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲು ಮುಂದಾಗುವ ಉತ್ಸಾಹಿಗಳಿಗೆ ಬ್ಯಾಂಕ್ಗಳಿಂದ ಸಾಲ, ಸೌಲಭ್ಯ ದೊರಕುತ್ತದೆ. ಯುವಜನರು ನಗರ ಗಳಿಗೆ ವಲಸೆ ಹೋಗುವುದನ್ನು ಈ ಮೂಲಕ ತಡೆಗಟ್ಟುವ ಉದ್ದೇಶವನ್ನು ಕೂಡ ಯೋಜನೆ ಹೊಂದಿದೆ’ ಎಂದರು.
ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ಎ.ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಸಣ್ಣ ಕೈಗಾರಿಕೆಗಳ ಮಾಲೀಕರು ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಾನಂದ್ ಹಾಜರಿದ್ದರು.
ಶ್ರಾವಣಿ ಮತ್ತು ವರ್ಷಿಣಿ ಪ್ರಾರ್ಥಿಸಿದರು. ವೆಂಕಟೇಶ್ ಕವಲ ಕೋಡು ಸ್ವಾಗತಿಸಿದರು. ಟ್ರಸ್ಟ್ನ ಅಧ್ಯಕ್ಷ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.