ರಾಯಚೂರು: ನಾಗರಿಕರು ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ಸಸಿ ನೆಡುವ ಮೂಲಕ ಆಚರಣೆ ಮಾಡಿಕೊಳ್ಳುತ್ತಿರುವುದು ಪರಿಸರದ ಸಂರಕ್ಷಣೆಗೆ ವಹಿಸಿರುವ ಕಾಳಜಿಯನ್ನು ತೋರಿಸುತ್ತಿದೆ. ನಗರಸಭೆಯ ಅಭಿಯಾನಕ್ಕೆ ಜನರು ಸ್ಪಂದನೆ ದೊರೆತಿದೆ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಅಭಿಯಾನದ ಪೂರ್ವಭಾವಿ ಸಭೆ ಹಾಗೂ ಈರಣ್ಣ ಬೆಂಗಾಲಿ ನಿರ್ದೇಶನದ ಸ್ವಚ್ಛ ಭಾರತ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ವರ್ಷ 15 ಸಾವಿರಕ್ಕಿಂತ ಅಧಿಕ ಸಸಿಗಳನ್ನು ನೆಡಲಾಗಿದೆ. ಕಳೆದ ವರ್ಷದಂತೆ ಸಸಿಗಳ ಕೊರತೆ ಆಗದಂತೆ ಅರಣ್ಯ ಇಲಾಖೆಯ ಜೊತೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಪೌರಾಯುಕ್ತ ಕೆ.ಗುರಲಿಂಗಪ್ಪ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಹೇಮಲತಾ ಬೂದೆಪ್ಪ ಅವರು ರಿಮೋಟ್ ಗುಂಡಿ ಒತ್ತುವ ಮೂಲಕ ಸ್ವಚ್ಛ ಭಾರತ ಕಿರುಚಿತ್ರ ಬಿಡುಗಡೆ ಮಾಡಿದರು. ಎಇಇ ಶಫೀ, ಸಾಹಿತಿ ವೀರ ಹನುಮಾನ, ಈರಣ್ಣ ಬೆಂಗಾಲಿ, ರಾಜಶೇಖರ, ಹಫೀಜುಲ್ಲಾ, ವರ್ಷಾ, ಸೋಮಣ್ಣ ಇದ್ದರು.