ಸ್ಥಳೀಯ ಕಿಲ್ಲಾ ಹತ್ತಿರ ಇರುವ ಮಹಾರಥೋತ್ಸವಕ್ಕೆ ವಿವಿಧ ಧರ್ಮ ಗುರುಗಳು ಪೂಜೆ ಸಲ್ಲಿಸಿದ ನಂತರ ಗ್ರಾಮದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಂಗೇಶ ದೇಶಪಾಂಡೆ ಹಾಗೂ ಪಂಚರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ರಥೋತ್ಸವ ಸುಮಾರು 6 ಗಂಟೆಗಳ ಕಾಲ ವಿವಿಧ ಬಡಾವಣೆಗಳಾದ ದೇಸಾಯಿ ಗಲ್ಲಿ, ಕುಂಬಾರ ಗಲ್ಲಿ, ಅರ್ಬಲ್ ಬ್ಯಾಂಕ್ ವೃತ್ತ, ಮುಖ್ಯ ಬೀದಿಯಿಂದ ಸಾಗಿ ಶಿವಾಜಿ ವೃತ್ತದ ಬಳಿ ಬಂದು ಕೊನೆಗೊಂಡಿತು. ನಂತರ ಗ್ರಾಮದೇವಿ ಕಮಿಟಿ ಅಧ್ಯಕ್ಷರು ಹಾಗೂ ದೇಸಾಯಿ ಮನೆತನದವರು ದೇವಿಗೆ ಪೂಜೆ ಸಲ್ಲಿಸಿದ ನಂತರ ದೇವಿಯನ್ನು ಜಾತ್ರಾ ಗದ್ದುಗೆಗೆ ಬೃಹತ್ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.