ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿ ಗದ್ದುಗೆ ಹಿಡಿದು ಒಂದು ತಿಂಗಳಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಸಚಿವರ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ್ದಾರೆ.
ಮುಖ್ಯವಾಗಿ ಸಚಿವರು ಪ್ರತಿವರ್ಷ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಪ್ರತಿವರ್ಷ ಮಾರ್ಚ್ 31ರೊಳಗೆ ಆಸ್ತಿ ವಿವರ ಸಲ್ಲಿಸಬೇಕು. ಅಲ್ಲದೇ ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಂದ ಅಂತರ ಕಾಯ್ದುಕೊಳ್ಳಬೇಕೆಂದು ಕೂಡ ಹೇಳಿದ್ದಾರೆ.
5,000ಕ್ಕಿಂತ ಹೆಚ್ಚು ಮೌಲ್ಯದ ಕೊಡುಗೆ ಸ್ವೀಕರಿಸುವಂತಿಲ್ಲ. ಸ್ವೀಕರಿಸಿದ್ದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಐಷರಾಮಿ ಬಂಗಲೆಯಲ್ಲಿ ವಾಸಿಸುವುದನ್ನು ಬಿಡಬೇಕು.
ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿಯಬೇಕೆಂದು ಆದಿತ್ಯನಾಥ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.